ಬೆಂಗಳೂರು: ಒಡಿಶಾದ 25ರ ಹರೆಯದ ಯುವತಿ ಮೇಲೆ ನಾಡ ಪಿಸ್ತೂಲಿನಿಂದ ಗುಂಡು ಹೊಡೆದು ಪರಾರಿಯಾಗಿದ್ದ ಆರೋಪಿ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಹೊರವರ್ತುಲ ರಸ್ತೆಯಲ್ಲಿ ಮಾರತ್ತಹಳ್ಳಿ ಸೇತುವೆ ಬಳಿ ಬುಧವಾರ ನಸುಕಿನ 2.30ರ ಸುಮಾರಿಗೆ ಪತ್ತೆಯಾಗಿದ್ದಾನೆ.
ಆರೋಪಿಯನ್ನು ಒಡಿಶಾ ನಿವಾಸಿ, ನಗರದ ಖಾಸಗಿ ಕಂಪನಿಯೊಂದರ ಸಾಫ್ಟ್ವೇರ್ಎಂಜಿನಿಯರ್ ಅಮರೇಂದ್ರ ಪಟ್ನಾಯಕ್(33) ಎಂದು ಗುರುತಿಸಲಾಗಿದೆ. ಈತನ್ನು ಸಾಕ್ರಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಚಿಂತಾಜನಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ಕತ್ತಿನ ಭಾಗದಲ್ಲಿ ಕೊಯ್ದು ಕೊಂಡಂತೆ ಮತ್ತು ದೇಹದಲ್ಲಿ ಅಪಘಾತದಿಂದ ಅಗಿರುವ ಗಾಯ ಪತ್ತೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಆರೋಪಿಯ ಕೈ ಬರಹ ಇರುವ 17 ಪುಟಗಳ ನೋಟ್ ಪುಸ್ತಕ ಸಿಕ್ಕಿದೆ. ಅದರ ಕೊನೆಯ ಪುಟದಲ್ಲಿ ತನ್ನ ಕೊನೆಯ ಆಸೆಯ ಬಗ್ಗೆ ಉಲ್ಲೇಖಿಸಿದ್ದು, ಮರಣಪತ್ರದಂತೆ ಕಾಣುತ್ತಿದೆ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ತನ್ನ ಪ್ರೀಯಸಿ ಪ್ರಿಯದರ್ಶಿನಿಗೆ ಗುಂಡು ಹೊಡೆದ ಬಳಿಕ ಆರೋಪಿ ಆತ್ಮಹತ್ಯೆಗೆ ಯತ್ನಿಸಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ತನಿಖೆ ಮುಂದುವರಿದೆ ಎಂದೂ ಅವರು ಹೇಳಿದ್ದಾರೆ.
ಮಂಗಳವಾರ ಸಂಜೆ ಪ್ರಿಯದರ್ಶಿನಿ ನೆಲೆಸಿದ್ದ ಪಿ.ಜಿ ಮುಂಭಾಗದಲ್ಲಿ, ಆಕೆಯ ಮೇಲೆ ಗುಂಡು ಹೊಡೆದು ಅಮರೇಂದರ್ ಪರಾರಿಯಾಗಿದ್ದ. ಪ್ರಿಯದರ್ಶಿನಿಯ ದೇಹ ಹೊಕ್ಕಿದ್ದ ಗುಂಡು ಹೊರತೆಗೆಯಲು ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.