ಹೊಯ್ಸಳರು ರೂಪಿಸಿದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ವಾಸ್ತಶಿಲ್ಪ ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ‘ಈವರೆಗೆ ಕರ್ನಾಟಕದ ಹಂಪಿ ಮತ್ತು ಪಟ್ಟದಕಲ್ಲು ಮಾತ್ರ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದ್ದವು. ಈಗ ಮೂರನೆಯದಾಗಿ ಹೊಯ್ಸಳ ವಾಸ್ತುಶಿಲ್ಪ ಈ ಪಟ್ಟಿಯನ್ನು ಸೇರಿದೆ. 2012ರಿಂದ ಪಶ್ಚಿಮ ಘಟ್ಟಗಳು ಪಾರಂಪರಿಕ ನೈಸರ್ಗಿಕ ತಾಣಗಳ ಪಟ್ಟಿಯಲ್ಲಿ, 2014ರಿಂದ ಶ್ರೀರಂಗಪಟ್ಟಣ ಮತ್ತು ಬಹುಮನಿ ವಾಸ್ತುಶಿಲ್ಪ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿವೆ. ಅವುಗಳ ಪರಿಶೀಲನೆಯೂ ಆದಷ್ಟು ಬೇಗ ನಡೆದು, ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಗಬೇಕು. ಈ ಬಗ್ಗೆ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.