ಬೆಂಗಳೂರು: ಮಹಿಳಾ ಸಬಲೀಕರಣ ಕಾರ್ಯಕ್ರಮದಡಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ರಾಜ್ಯದಲ್ಲಿ ಆಯೋಜಿಸಿದ್ದ ಪ್ರತಿಭಾನ್ವಿತ ಹೆಣ್ಣು ಮಕ್ಕಳ ಅನ್ವೇಷಣೆಯಲ್ಲಿ ಐವರು ಯುವತಿಯರು ತಲಾ 20 ಗ್ರಾಂ. ಚಿನ್ನದ ನಾಣ್ಯ ಗೆದ್ದುಕೊಂಡರು.
ಧಾರವಾಡದ ಕರ್ನಾಟಕ ಕಾಲೇಜಿನ ವೀಣಾ ಎಂ. ಪಟ್ಟಣಶೆಟ್ಟಿ, ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ದೀಕ್ಷಾ ಎಂ., ಶಿವಮೊಗ್ಗದ ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ರಂಜಿತಾ ಕೆ.ಎಸ್, ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ದಿವ್ಯಶ್ರೀ ಹಾಗೂ ಸೇಂಟ್ ಜೋಸೆಫ್ ಕಾಲೇಜಿನ ಸಂಜನಾ ಎಸ್. ಅವರೇ ಈ ಅದೃಷ್ಟಶಾಲಿಗಳು.
‘ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ವಿಜಯಪುರ, ಧಾರವಾಡ ಸೇರಿದಂತೆ ರಾಜ್ಯದಾದ್ಯಂತ 25 ಕಾಲೇಜುಗಳಲ್ಲಿ ಪ್ರತಿಭಾ ಅನ್ವೇಷಣೆ ನಡೆಸಿದ್ದೇವೆ. ಪ್ರಥಮ ಸುತ್ತಿನಲ್ಲಿ ಅರ್ಹತೆ ಪಡೆದ 125 ವಿದ್ಯಾರ್ಥಿನಿಯರಿಗೆ ತಲಾ ₹ 25 ಸಾವಿರ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಗಿದೆ. ಆನ್ ಲೈನ್ ಮತದಾನದ ಆಧಾರದ ಮೇಲೆ ಐವರು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡ ಲಾಗಿದೆ’ ಎಂದು ಸಂಸ್ಥೆಯ ಎಂ.ಡಿ ಆಶರ್ ಒ. ತಿಳಿಸಿದರು.
‘ಸಂಸ್ಥೆಯು ವಾರ್ಷಿಕ ಶೇ 5ರಷ್ಟು ನಿವ್ವಳ ಲಾಭವನ್ನು ಸಿಎಸ್ಆರ್ ಅಡಿ ವಿಧಾಯಕ ಕಾರ್ಯಕ್ಕೆ ಬಳಸುತ್ತಿದೆ. ಈವರೆಗೆ ಸಾವಿರ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ನೆರವಾಗಿದ್ದೇವೆ. 8 ಸಾವಿರ ಮಂದಿಗೆವಿದ್ಯಾರ್ಥಿವೇತನ ನೀಡಿದ್ದೇವೆ’ ಎಂದರು.
‘ಬಡ ಯುವತಿಯರ ವಿವಾಹಕ್ಕೆ ನೆರವು’
ಬಡ ಕುಟುಂಬಗಳ ಯುವತಿಯರ ವಿವಾಹಕ್ಕೆ ಆರ್ಥಿಕ ಸಹಾಯ ಮಾಡುವ ‘ಗೋಲ್ಡನ್ ಹಾರ್ಟ್’ ಕಾರ್ಯಕ್ರಮವನ್ನು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಸಂಸ್ಥೆ ಪ್ರಕಟಿಸಿದೆ. ‘ವಧುವಿಗೆ ಒಡವೆ ಸೇರಿದಂತೆ ಅಗತ್ಯ ನೆರವು ನೀಡುತ್ತೇವೆ. ಆಸಕ್ತರು ಹತ್ತಿರದ ಮಳಿಗೆಗಳಲ್ಲಿ ಹೆಸರು ನೋಂದಾಯಿಸಿ ಕೊಳ್ಳಬಹುದು. ಈ ಕಾರ್ಯಕ್ರಮಕ್ಕಾಗಿಯೇ 101ಕೆ.ಜಿ ಚಿನ್ನವನ್ನು ಮೀಸಲಿಡ ಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಪಿ. ಅಹ್ಮದ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.