ಬೆಂಗಳೂರು: ‘ಕರ್ನಾಟಕದಲ್ಲಿ ಕನ್ನಡ ಗೊತ್ತಿಲ್ಲದವರನ್ನು ಗುರುತಿಸಲು ಸಮೀಕ್ಷೆ ನಡೆಸಬೇಕು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.
ವೇಮಗಲ್ ನಾರಾಯಣಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ‘ಸಂಸ್ಕೃತಿ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡದ ಬುನಾದಿ ಮೊದಲು ಬೆಂಗಳೂರಿನಲ್ಲಿ ಗಟ್ಟಿಯಾಗಬೇಕು. ಕನ್ನಡವನ್ನು ಅಸಡ್ಡೆ ಮಾಡುವ, ನಿರ್ಲಕ್ಷ್ಯ ಮಾಡುವ ಸರ್ಕಾರಗಳು ಹೋಗಿ ಈಗ ಕನ್ನಡವನ್ನು ಬೆಳೆಸುವ ಸರ್ಕಾರ ಬಂದಿದೆ. ಕರ್ನಾಟಕದಲ್ಲಿ ಸಮೀಕ್ಷೆ ನಡೆಸಿ ಕನ್ನಡ ಗೊತ್ತಿಲ್ಲದವರನ್ನು ಗುರುತಿಸಬೇಕು. ಅದೇ ರೀತಿ ಕನ್ನಡ ತಾಯಂದಿರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸತೊಡಗಿದ್ದಾರೆ. ಅವರ ಮಕ್ಕಳಿಗೂ ಕನ್ನಡ ಕೂಡ ಕಲಿಸುವಂತೆ ಮಾಡಬೇಕು’ ಎಂದರು.
ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರು. ಕನ್ನಡ ಭಾಷೆ ಬಾರದವರಿಗೆ, ಅರ್ಧ ಬರುವವರಿಗೆ 30 ದಿನಗಳಲ್ಲಿ ಕನ್ನಡ ಕಲಿಸುವ ಕೆಲಸವಾಗಬೇಕು. ಅದು ಮೌಖಿಕವಾಗಿಯಾದರೂ ಸರಿ’ ಎಂದು ಹಂಸಲೇಖ ತಿಳಿಸಿದರು.
ಹಿಂದುಸ್ತಾನಿ ಗಾಯಕ ಮುದ್ದುಮೋಹನ್, ಸಾಹಿತಿ ಜಿ. ಕೃಷ್ಣಪ್ಪ, ಸಂಗೀತ ವಿದ್ವಾಂಸರಾದ ಎಚ್.ಆರ್. ಲೀಲಾವತಿ, ಹಿರಿಯ ಜಾನಪದ ತಜ್ಞ ಗೊ.ರು. ಚನ್ನಬಸಪ್ಪ, ಲೇಖಕಿ ಕಮಲಾ ಹಂಪನಾ ಮತ್ತು ಕಥೆಗಾರ ಕರಿಗೌಡ ಬೀಚನಹಳ್ಳಿ ಅವರಿಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ತಿಮ್ಮೇಶ್, ಲಲಿತಾ ಬಿ.ಕೆ., ಪ್ರತಿಷ್ಠಾನದ ಅಧ್ಯಕ್ಷ ವೇಮಗಲ್ ನಾರಾಯಣಸ್ವಾಮಿ, ಗೌರವ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಆನಂದ ಮಾದಲಗೆರೆ ಇದ್ದರು.