ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆ: ಯುಡಿಆರ್ ದಾಖಲು

Published 23 ಮಾರ್ಚ್ 2024, 3:35 IST
Last Updated 23 ಮಾರ್ಚ್ 2024, 3:35 IST
ಅಕ್ಷರ ಗಾತ್ರ

ಬೆಂಗಳೂರು: ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಹಳಿಗೆ ಹಾರಿ ಕಾನೂನು ವಿದ್ಯಾರ್ಥಿ ಧ್ರುವ್ ಠಕ್ಕರ್ (19) ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಚಂದ್ರಾ ಲೇಔಟ್ ಠಾಣೆ ಪೊಲೀಸರು ಯುಡಿಆರ್ (ಅಸಹಜ ಸಾವು) ದಾಖಲಿಸಿಕೊಂಡಿದ್ದಾರೆ.

‘ಮುಂಬೈನ ಧ್ರುವ್, ನಗರದಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದಲ್ಲಿ ಬಿ.ಎ.ಎಲ್‌.ಎಲ್‌.ಬಿ ವ್ಯಾಸಂಗ ಮಾಡುತ್ತಿದ್ದರು. ಘಟನೆಯಿಂದ ಛಿದ್ರಗೊಂಡಿದ್ದ ಅವರ ಮೃತದೇಹವನ್ನು ಸಂಗ್ರಹಿಸಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಕುಟುಂಬಸ್ಥರ ಅನುಮತಿ ಪಡೆದು ಮರಣೋತ್ತರ ಪರೀಕ್ಷೆ ನಡೆಸಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿಶ್ವವಿದ್ಯಾಲಯದ ವಸತಿನಿಲಯದ ಮೇಲ್ವಿಚಾರಕರು ಹಾಗೂ ಕೆಲ ವಿದ್ಯಾರ್ಥಿಗಳಿಂದ ಹೇಳಿಕೆ ಪಡೆಯಲಾಗಿದೆ. ‘ಹೊರಗಡೆ ಹೋಗಿ ಬರುತ್ತೇನೆ’ ಎಂಬುದಾಗಿ ಸ್ನೇಹಿತರಿಗೆ ಹೇಳಿದ್ದ ಧ್ರುವ್, ಮಾರ್ಚ್ 21ರಂದು ಮಧ್ಯಾಹ್ನ ಅತ್ತಿಗುಪ್ಪೆ ನಿಲ್ದಾಣಕ್ಕೆ ಬಂದಿದ್ದರು’ ಎಂದು ತಿಳಿಸಿವೆ.

ಸಿ.ಸಿ.ಸಿ.ಟಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ: ‘ರೈಲು ಬರುವ ಸಮಯಕ್ಕೆ ಹಳಿಗೆ ಇಳಿದಿದ್ದ ಧ್ರುವ್, ಅಲ್ಲಿಯೇ ಅಂಗಾತ ಮಲಗಿದ್ದ. ಅದನ್ನು ನೋಡಿದ್ದ ಭದ್ರತಾ ಸಿಬ್ಬಂದಿ, ಯುವಕರನ್ನು ರಕ್ಷಿಸಲು ಕೂಗಾಡಿದ್ದರು. ಅಷ್ಟರಲ್ಲೇ ರೈಲು ನಿಲ್ದಾಣಕ್ಕೆ ಬಂದಿತ್ತು. ಧ್ರುವ್ ಅವರ ಮೇಲೆಯೇ ರೈಲು ಹರಿದಿತ್ತು. ರೈಲಿನಡಿ ಧ್ರುವ್ ಮೃತದೇಹ ಸಿಲುಕಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಧ್ರುವ್ ಆತ್ಮಹತ್ಯೆಗೆ ಕಾರಣವೇನು? ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಧ್ರುವ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆಂಬ ಮಾಹಿತಿ ಇದೆ. ಈ ಬಗ್ಗೆ ಕುಟುಂಬಸ್ಥರಿಂದ ಹೇಳಿಕೆ ಪಡೆಯಬೇಕಿದೆ’ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT