‘ಸುರಕ್ಷತೆ’ ತಪ್ಪಿದರೆ ಕಠಿಣ ಕಾನೂನು ಕ್ರಮ: ಕಮಿಷನರ್ ಎಚ್ಚರಿಕೆ
ಬೆಂಗಳೂರು: ‘ಮೊಬೈಲ್ ಆ್ಯಪ್ ಆಧಾರಿತ ಸಾರಿಗೆ, ಸರಕು ಸಾಗಣೆ ಹಾಗೂ ಆಹಾರ ಪೂರೈಕೆ ಮಾಡುವ ಕಂಪನಿಗಳು ಗ್ರಾಹಕರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು. ನಿಯಮ ಮೀರಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಎಚ್ಚರಿಕೆ ನೀಡಿದರು.
ನಗರದ ಕಮಿಷನರ್ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಕಂಪನಿಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಆ್ಯಪ್ ಮೂಲಕ ರ್ಯಾಪಿಡೊ ಬೈಕ್ ಸೇವೆ ಪಡೆದಿದ್ದ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಆರೋಪದಡಿ ಬೈಕ್ ಸವಾರ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ಈ ಘಟನೆಯಿಂದ ಆ್ಯಪ್ ಆಧಾರಿತ ಸೇವೆ ಪಡೆಯುವವರಲ್ಲಿ ಆತಂಕ ಶುರುವಾಗಿತ್ತು. ಹೀಗಾಗಿ, ಪೊಲೀಸರು ಈ ಸಭೆ ಹಮ್ಮಿಕೊಂಡಿದ್ದರು. ಓಲಾ, ಉಬರ್, ಜೊಮ್ಯಾಟೊ, ಡನ್ಝೊ, ಫ್ಲಿಪ್ಕಾರ್ಟ್, ಅಮೆಜಾನ್, ರ್ಯಾಪಿಡೊ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
‘ಸಾರ್ವಜನಿಕರ ಸುರಕ್ಷತೆಗೆ ಎಲ್ಲ ಕಂಪನಿಗಳು ಒತ್ತು ನೀಡಬೇಕು. ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಂಪನಿಯ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ರೂಪಿಸಬೇಕು. ಯಾವುದೇ ತುರ್ತು ಸಂದರ್ಭದಲ್ಲೂ ಪರಿಸ್ಥಿತಿಯನ್ನು ಎದುರಿಸಲು ಪೊಲೀಸರು ನಿಮ್ಮ ಜೊತೆಗಿರಲಿದ್ದಾರೆ’ ಎಂದು ಪ್ರತಾಪ್ ರೆಡ್ಡಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.