ಬೆಂಗಳೂರು: ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆಗೆ ಸಂಬಂಧಪಡದ ಅಮಾಯಕ ಮುಸ್ಲಿಮರನ್ನು ಪೊಲೀಸರು ಬಂಧಿಸುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಮಹಮ್ಮದೀಯರ ಕನ್ನಡ ವೇದಿಕೆಯು ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ವೇದಿಕೆಯ ಅಧ್ಯಕ್ಷ ಸಮೀವುಲ್ಲಾ ಖಾನ್, ಪದಾಧಿಕಾರಿಗಳಾದ ಎನ್. ನಜೀರ್, ಷಹಜಹಾನ್, ಸಾಗರ್ ಸಮೀವುಲ್ಲಾ ಮೊದಲಾದವರು ಈ ಕುರಿತು ಮನವಿ ಸಲ್ಲಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ. ಮುಗ್ಧರಿಗೆ ಅನ್ಯಾಯ ಆಗದಂತೆ, ಬಡವರ ಬದುಕಿಗೆ ಬರೆ ಬೀಳದಂತೆ ನೋಡಿಕೊಳ್ಳುವಂತೆ ಇಲಾಖೆಗೆ ತಾಕೀತು ಮಾಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.