ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Namma Metro| ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕುಸಿತ: ತಾಯಿ‌ - ಮಗು ಸಾವು

Last Updated 10 ಜನವರಿ 2023, 18:19 IST
ಅಕ್ಷರ ಗಾತ್ರ

ಬೆಂಗಳೂರು: ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಮಂಗಳವಾರ ಬೆಳಿಗ್ಗೆ ಉರುಳಿಬಿದ್ದ ಪರಿಣಾಮ, ಪತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಪತ್ನಿ– ಮಗು ಮೃತಪಟ್ಟಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ತೇಜಸ್ವಿನಿ (28) ಹಾಗೂ ಅವರ ಎರಡೂವರೆ ವರ್ಷದ ಮಗು ವಿಹಾನ್ ಮೃತರು. ಅವಘಡದಲ್ಲಿ ತೇಜಸ್ವಿನಿ ಅವರ ಪತಿ ಲೋಹಿತ್‌ ಕುಮಾರ್ ಸುಲಾಖೆ (33) ಗಾಯಗೊಂಡಿದ್ದಾರೆ. ಮಗಳು ವಿಸ್ಮಿತಾಳಿಗೆ ಸಣ್ಣ–ಪುಟ್ಟ ಗಾಯ ಗಳಾಗಿವೆ.

‘ಕೆ.ಆರ್. ಪುರದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೊ ರೈಲು ನಿಗಮ) ವತಿಯಿಂದ ಮೆಟ್ರೊ ಮಾರ್ಗ ನಿರ್ಮಿಸಲಾಗುತ್ತಿದೆ. ಹೆಣ್ಣೂರು ಕ್ರಾಸ್‌ನಿಂದ ನಾಗವಾರ ಜಂಕ್ಷನ್‌ಗೆ ತೆರಳುವ ರಸ್ತೆಯಲ್ಲಿ ಪಿಲ್ಲರ್ ನಿರ್ಮಿಸುವ ಕೆಲಸ ಆರಂಭಿಸ ಲಾಗಿದೆ. ಇದೇ ಮಾರ್ಗದಲ್ಲಿ ಪಿಲ್ಲರ್ ನಿರ್ಮಾಣಕ್ಕಾಗಿ ನಿಲ್ಲಿಸಲಾಗಿದ್ದ 25 ಮೀಟರ್ ಎತ್ತರ ಹಾಗೂ 6 ಮೀಟರ್ ಅಗಲದ ಕಬ್ಬಿಣದ ಚೌಕಟ್ಟು ಮಂಗಳ ವಾರ ಬೆಳಿಗ್ಗೆ 10.30ರ ಸುಮಾರಿಗೆ ಉರುಳಿಬಿದ್ದಿದೆ ಎಂದು ಪೂರ್ವ ವಿಭಾ ಗದ ಡಿಸಿಪಿ ಭೀಮಾಶಂಕರ್ ಗುಳೇದ ‘ಪ್ರಜಾವಾಣಿ’ಗೆ ತಿಳಿಸಿದರು.

ಕ್ರಿಮಿನಲ್ ಮೊಕದ್ದಮೆ: ಸಿ.ಎಂ ಆದೇಶ
ಮೆಟ್ರೊ ಕಾಮಗಾರಿಯ ಮುಖ್ಯ ಎಂಜಿನಿಯರ್‌, ಕಾಮಗಾರಿಯ ಉಸ್ತುವಾರಿ ವಹಿಸಿದ್ದ ಎಲ್ಲ ಎಂಜಿನಿ ಯರ್‌ಗಳನ್ನು ಅಮಾನತು ಮಾಡಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.

ಈ ದುರ್ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಗುತ್ತಿಗೆ ಪಡೆದಿರುವ ಕಂಪನಿಯ ಮುಖ್ಯಸ್ಥರ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸೂಚಿಸಿದ್ದಾರೆ.

₹ 40 ಲಕ್ಷ ಪರಿಹಾರ: ಮೃತರ ಕುಟುಂಬಕ್ಕೆ ಮುಖ್ಯಮಂತ್ರಿ ನಿಧಿಯಿಂದ ₹ 20 ಲಕ್ಷ ಹಾಗೂ ಬಿಎಂಆರ್‌ಸಿಎಲ್ ಕಡೆಯಿಂದ ₹ 20 ಲಕ್ಷ ಪರಿಹಾರ ಘೋಷಿಸಲಾಗಿದೆ.

‘ಉರುಳುವ ಮಾಹಿತಿಯಿದ್ದರೂ ಅಧಿಕಾರಿ ನಿರ್ಲಕ್ಷ್'
‘ಮೆಟ್ರೊ ಪಿಲ್ಲರ್ ಅಳವಡಿಕೆಗಾಗಿ ಸ್ಥಳದಲ್ಲಿ ಗುಂಡಿ ಅಗೆದು, ಕಬ್ಬಿಣದ ಚೌಕಟ್ಟು ನಿಲ್ಲಿಸಲಾಗಿತ್ತು. ನೆಲದಡಿ ಮಾತ್ರ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿತ್ತು. ಮೇಲ್ಭಾಗದಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕುವ ಕೆಲಸ ಬಾಕಿ ಇತ್ತು. ವಾರದ ಹಿಂದೆಯಷ್ಟೇ ಕಬ್ಬಿಣದ ಚೌಕಟ್ಟು ಸಡಿಲಗೊಂಡಿತ್ತು’ ಎಂದು ಸ್ಥಳೀಯರು ದೂರಿದರು.

‘ಸಡಿಲಗೊಂಡಿದ್ದ ಕಬ್ಬಿಣದ ಚೌಕಟ್ಟು ನೋಡಿದ್ದ ಕಾರ್ಮಿಕರು, ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಜೊತೆಗೆ, ಸಾರ್ವಜನಿಕರ ಜೊತೆಯಲ್ಲೂ ಮಾಹಿತಿ ಹಂಚಿಕೊಂಡಿದ್ದರು. ಕಬ್ಬಿಣದ ಚೌಕಟ್ಟು ಮುಖ್ಯರಸ್ತೆಯಲ್ಲಿ ಉರುಳಿ ಬಿದ್ದರೆ ಅನಾಹುತ ಸಂಭವಿಸಹುದೆಂದು ವಾರದ ಹಿಂದೆಯೇ ಬಿಎಂಆರ್‌ಸಿಎಲ್ ಅಧಿಕಾರಿಗೆ ವಿಷಯ ತಿಳಿಸಲಾಗಿತ್ತು’ ಎಂದು ಹೇಳಿದರು.

‘ಚೌಕಟ್ಟು ವಾಲುತ್ತಿರುವ ಬಗ್ಗೆ ಅಧಿಕಾರಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ತಾಯಿ–ಮಗು ಮೃತಪಟ್ಟಿದ್ದಾರೆ’ ಎಂದೂ ಸ್ಥಳೀಯರು ದೂರಿದರು.

‘ಮೆಟ್ರೊ ಕಾಮಗಾರಿ ಅವೈಜ್ಞಾನಿಕ’
‘ಸೈಟ್ ಎಂಜಿನಿಯರ್, ಉಸ್ತುವಾರಿ ಅಧಿಕಾರಿಗಳು, ಕಾಮಗಾರಿ ಗುತ್ತಿಗೆದಾರ, ಬಿಎಂಆರ್‌ಸಿಎಲ್ ಅಧಿಕಾರಿಗಳು ಹಾಗೂ ಇತರರು ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯದಿಂದ ಕಾಮಗಾರಿ ನಡೆಸುತ್ತಿದ್ದರು’ ಎಂದು ಸಿವಿಲ್ ಎಂಜಿನಿಯರ್‌ ಆಗಿರುವ ಲೋಹಿತ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಮೆಟ್ರೊ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಕೈಗೊಳ್ಳಲಾಗಿತ್ತು. ಇದರಿಂದಾಗಿ ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್‌ನ ಕಬ್ಬಣದ ಚೌಕಟ್ಟು ಉರುಳಿಬಿದ್ದಿದ್ದು, ನನ್ನ ಪತ್ನಿ ಹಾಗೂ ಮಗು ಮೃತಪಟ್ಟಿದ್ದಾರೆ. ಘಟನೆಗೆ ಕಾರಣವಾಗಿರುವ ಇವರೆಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದೂ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT