ಬೆಂಗಳೂರು: ರಾಜ್ಯದಲ್ಲಿ ಎಂಎಸ್ಐಎಲ್ ಮದ್ಯ ಮಳಿಗೆ ತೆರೆಯಲು ಪರವಾನಗಿ ನೀಡಿದ ಸರ್ಕಾರದ ತೀರ್ಮಾನವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಅಬಕಾರಿ ನಿಯಮ 3(11–ಸಿ) ಉಲ್ಲಂಘಿಸಿ ಎಂಎಸ್ಐಎಲ್ ಮಳಿಗೆಗೆ ಪರವಾನಗಿ ನೀಡಲಾಗಿದೆ ಎಂದು ಖಾಸಗಿ ಮದ್ಯದ ಅಂಗಡಿಗಳ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದಂಗೌಡರ್ ಅವರಿದ್ದ ಪೀಠ, ಈ ಆದೇಶ ನೀಡಿದೆ.
‘ಒಂದು ಪ್ರದೇಶದ ಜನಸಂಖ್ಯೆ ಆಧರಿಸಿ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡಬೇಕು. ಎಂಎಸ್ಐಎಲ್ಗೆ ಪರವಾನಗಿ ನೀಡುವಾಗ ಅಕ್ಕ–ಪಕ್ಕ ಇರುವ ಯಾವುದೇ ಮದ್ಯದ ಅಂಗಡಿ ಪರವಾನಗಿ ರದ್ದುಗಳಿಸಿಲ್ಲ. ಹೀಗಾಗಿ ಎಂಎಸ್ಐಎಲ್ಗೆ ಪರವಾನಗಿ ನೀಡಿರುವನ್ನು ಪ್ರಶ್ನಿಸುವ ಅಧಿಕಾರ ಅರ್ಜಿದಾರರಿಗೆ ಇಲ್ಲ’ ಎಂದು ಎಂಎಸ್ಐಎಲ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದಿಸಿದರು.
‘ಸರ್ಕಾರದ ಈ ತೀರ್ಮಾನ ಅಸಂವಿಧಾನಿಕ ಎಂದು ಹೇಳಲು ಆಗುವುದಿಲ್ಲ. ಆದರೆ, ಸರ್ಕಾರದ ಏಜೆನ್ಸಿ ಏಕಸ್ವಾಮ್ಯ ಸೃಷ್ಟಿಸುವ ಸಾಧ್ಯತೆ ಇದೆ’ ಎಂದೂ ಪೀಠ ಹೇಳಿತು.