ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಿಸಿ ಕೊಲೆ: ಠಾಣೆಗೆ ಬಂದು ಶರಣಾದ ಆರೋಪಿ

Published 31 ಮಾರ್ಚ್ 2024, 16:01 IST
Last Updated 31 ಮಾರ್ಚ್ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯ 5ನೇ ಬ್ಲಾಕ್‌ನ ಚಂದ್ರಗುಪ್ತ ಆಟದ ಮೈದಾನದ ಬಳಿ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಪಶ್ಚಿಮ ಬಂಗಾಳದ ಕೋಲ್ಕತ್ತದ ನಿವಾಸಿ ಫರೀದಾ ಖಾತೂನ್‌(42) ಕೊಲೆಯಾದ ಮಹಿಳೆ. ಆರೋಪಿ ಎನ್‌.ಎಲ್‌.ಗಿರೀಶ್‌ ಅಲಿಯಾಸ್‌ ರೆಹಾನ್‌ ಅಹಮದ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಫರೀದಾ ಖಾತೂನ್‌ ಅವರ ಪತಿ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಈಕೆಗೆ ಇಬ್ಬರು ಮಕ್ಕಳಿದ್ದಾರೆ.  2022ರಲ್ಲಿ ಕೋಲ್ಕತ್ತದಿಂದ ನಗರಕ್ಕೆ ಬಂದು ನೆಲೆಸಿದ್ದರು. ನಗರದಲ್ಲಿ ಗಿರೀಶ್‌ ಪರಿಚಯವಾದ ಮೇಲೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಗಿರೀಶ್, ತನ್ನ ಹೆಸರನ್ನು ರೆಹಾನ್‌ ಅಹಮದ್‌ ಎಂದು ಬದಲಿಸಿಕೊಂಡು ನಗರದಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಫರೀದಾ ಖಾತೂನ್‌ ಜಯನಗರದ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದಳು’ ಎಂದು ಪೊಲೀಸರು ಹೇಳಿದರು.

‘ಮಾರ್ಚ್‌ 3ರಂದು ಕಾರ್ಯನಿಮಿತ್ತ ಕೋಲ್ಕತ್ತಗೆ ತೆರಳಿದ್ದ ಫರೀದಾ, ಮಾರ್ಚ್‌ 29ರಂದು ವಾಪಸ್‌ ಬಂದಿದ್ದರು. ಅದೇ ದಿನ ಗಿರೀಶ್‌ನ ಹುಟ್ಟುಹಬ್ಬದ ನಿಮಿತ್ತ ಜಯನಗರದಲ್ಲಿ ಓಯೋ ರೂಂ ಪಡೆದುಕೊಂಡು ವಾಸ್ತವ್ಯ ಮಾಡಿದ್ದರು. ಮರುದಿವಸ ನಗರದ ಹಲವು ಸ್ಥಳಕ್ಕೆ ಭೇಟಿ ನೀಡಿದ್ದರು. ಅದೇ ವೇಳೆ ಆರೋಪಿ ಫರೀದಾಳನ್ನು ಮದುವೆ ಆಗುವಂತೆ ಒತ್ತಾಯಿಸಿದ್ದ. ಅದನ್ನು ಆಕೆ ನಿರಾಕಿಸಿದ್ದಳು. ಆಕೆಯನ್ನು ಅಲ್ಲಿಯೇ ಬಿಟ್ಟು ಮನೆಗೆ ತೆರಳಿದ್ದ.’

‘ಶನಿವಾರ ವಾಪಸ್‌ ರೂಂಗೆ ಬಂದು ಆಕೆಯನ್ನು ಹೋಟೆಲ್‌ಗೆ ಕರೆದೊಯ್ದು ಬೆಳಿಗ್ಗೆ ಇಬ್ಬರೂ ತಿಂಡಿ ಮಾಡಿದ್ದರು. ಮಧ್ಯಾಹ್ನವೂ ಹೋಟೆಲ್‌ನಲ್ಲಿ ಊಟ ಮಾಡಿ, ಜಯನಗರ, ಜೆ.ಪಿ.ನಗರದ ಉದ್ಯಾನಗಳಲ್ಲಿ ಸುತ್ತಾಡಿದ್ದರು. ಸಂಜೆ 7 ಗಂಟೆ ಸುಮಾರಿಗೆ ಜಯನಗರದ ಚಂದ್ರಗುಪ್ತ ಉದ್ಯಾನದ ಬಳಿ ಬಂದಾಗ ಮತ್ತೆ ಮದುವೆ ಆಗುವಂತೆ ಒತ್ತಾಯಿಸಿದ್ದ. ಆಗಲೂ ನಿರಾಕರಣೆ ಮಾಡಿದ್ದಕ್ಕೆ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಆತನೇ ಚಾಕು ಸಮೇತ ಠಾಣೆಗೆ ಬಂದು ಶರಣಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT