ಬೆಂಗಳೂರು: ‘ಹನುಮಾನ್ ಚಾಲೀಸಾ ಹಾಕಿದ್ದ ವಿಚಾರಕ್ಕೆ ಮೊಬೈಲ್ ಅಂಗಡಿ ಮಾಲೀಕನ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾದ ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರ್ತಪೇಟೆಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇದರ ಬೆನ್ನಲ್ಲೇ ಅಂಗಡಿ ಮಾಲೀಕ, ಗಾಯಾಳು ಮುಕೇಶ್ ಅವರಿಂದ ಮರು ಹೇಳಿಕೆ ಪಡೆದಿರುವ ಪೊಲೀಸರು ಇದುವರೆಗೂ ಒಬ್ಬ ಬಾಲಕ, ಸುಲೇಮಾನ್, ಶಹನವಾಜ್, ರೋಹಿತ್, ತರುಣ್ ಎಂಬವರನ್ನು ಬಂಧಿಸಿದ್ದಾರೆ.
ಎಲ್ಲ ಆರೋಪಿಗಳನ್ನೂ ಬಂಧಿಸಬೇಕು ಎಂದು ಬಿಜೆಪಿ ನಾಯಕರು ಪಟ್ಟು ಹಿಡಿದಿದ್ದರು. ಪೊಲೀಸರ ಭರವಸೆ ಮೇರೆಗೆ ಪ್ರತಿಭಟನೆಯನ್ನು ಕೈಬಿಟ್ಟರು. ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತೆ ರ್ಯಾಲಿ ನಡೆಸುವುದಾಗಿ ಬಿಜೆಪಿ ನಾಯಕರು ಎಚ್ಚರಿಸಿದರು.
ಇದಕ್ಕೂ ಮೊದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ಶಾಸಕರಾದ ಎಸ್.ಸುರೇಶ್ ಕುಮಾರ್, ಸಿ.ಕೆ. ರಾಮಮೂರ್ತಿ ಅವರು ಸ್ಥಳಕ್ಕೆ ಬಂದು ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿದರು. ರಸ್ತೆಯಲ್ಲಿ ಕುಳಿತು ಹನುಮಾನ್ ಚಾಲೀಸಾ ಪಠಣಕ್ಕೆ ಮುಂದಾದ ವೇಳೆ ಶೋಭಾ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಲಾಯಿತು. ಪ್ರತಿಭಟನೆ ವೇಳೆ ವಾಗ್ವಾದವೂ ನಡೆಯಿತು.
ಭಾನುವಾರ ಸಂಜೆ 6.30ರ ಸುಮಾರಿಗೆ ಕಬ್ಬನ್ಪೇಟೆಯ ಸಿದ್ದಣ್ಣಗಲ್ಲಿಯಲ್ಲಿ ಮೊಬೈಲ್ ಅಂಗಡಿಯಲ್ಲಿ ಈ ಹಲ್ಲೆ ಘಟನೆ ನಡೆದಿತ್ತು. ಆರೋಪಿಗಳು ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.