ಬೆಂಗಳೂರು: ‘ಬೆಂಗಳೂರಿನ ಅಭಿವೃದ್ದಿಗೆ ತೆರಿಗೆ ಸಂಗ್ರಹವೂ ಬಹಳ ಮುಖ್ಯ. ಕೆಲವು ವರ್ಷಗಳಿಂದ ಒಟ್ಟು ರೂ 2500 ಕೋಟಿ ತೆರಿಗೆ ಬಾಕಿ ಉಳಿದಿದೆ. ಪ್ರಸ್ತುತ ತೆರಿಗೆ ಕಟ್ಟದೇ ಇದ್ದರೆ ಅಂಥವರ ಹೆಸರುಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡಲಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.
ಶಂಕರಮಠ ವಾರ್ಡ್ನಲ್ಲಿ ಇಂದು ಬ್ಯಾಡ್ಮಿಂಟನ್ ಕೋರ್ಟ್, ಟೆನ್ನಿಸ್ ರೂಫ್, ಬಿಬಿಎಂಪಿ ಕಚೇರಿ, ಪ್ರತಿಮೆ ಅನಾವರಣ ಸೇರಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ಜನಸಾಮಾನ್ಯರು ತೆರಿಗೆ ಕಟ್ಟದೇ ಇದ್ದರೆ ಬಿಬಿಎಂಪಿಯನ್ನು ಹೇಗೆ ನಡೆಸಲು ಸಾಧ್ಯ? ಹೀಗಾಗಿ ತೆರಿಗೆ ವಂಚಿತರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ’ಎಂದರು.
‘ಬೆಂಗಳೂರು ನಗರವನ್ನು ಮುಂದಿನ ಐದು ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ಈಗಾಗಲೇ ನೀಲಿನಕಾಶೆ ತಯಾರಿಸಲು ಸೂಚಿಸಿದ್ದೇನೆ’ ಎಂದರು.
‘ಬೆಂಗಳೂರು ಬೆಳೆಯುತ್ತಿರುವ ನಗರ. ಮುಂದಿನ ಐದು ವರ್ಷಗಳಲ್ಲಿ ನಗರವನ್ನು ಅಭಿವೃದ್ಧಿ ಪಡಿಸಲು ₹ 50 ಸಾವಿರ ಕೋಟಿ ಮೀಸಲಿಡಲಿದ್ದೇವೆ. ಜೊತೆಗೆ ರೋಡ್ಮ್ಯಾಪ್ ತಯಾರು ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ಎಂದರು.
ಯಾರೋ ವಿರೋಧ ಮಾಡಿದರೆಂದು ಉಕ್ಕಿನ ಸೇತುವೆ ಯೋಜನೆ ಕೈಬಿಡಲಾಗದು
‘ಬೆಂಗಳೂರಿನ ಅಭಿವೃದ್ಧಿಗಾಗಿ ₹ 25 ಸಾವಿರ ಕೋಟಿ ರು. ವೆಚ್ಚದಲ್ಲಿ ಎರಡು ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ಕೈಗೊಂಡಿದ್ದೇವೆ.ಸ್ಟೀಲ್ಬ್ರಿಡ್ಜ್ ಯೋಜನೆ ಸಂಬಂಧ ಕೆಲವರಷ್ಟೇ ವಿರೋಧ ಮಾಡುತ್ತಿದ್ದಾರೆ. ಇದು ಸಹ ಮತ್ತೊಂದು ಎಲಿವೇಟೆಡ್ ರಸ್ತೆ.. ಆದರೆ, ಕೊಂಚ ಪ್ರಮಾಣದಲ್ಲಿ ಸ್ಟೀಲ್ ಬಳಸುತ್ತಿರುವುದರಿಂದ ಸ್ಟೀಲ್ ಬ್ರಿಡ್ಜ್ ಎನ್ನಲಾಗುತ್ತದೆ. ಯಾರೋ ವಿರೋಧಮಾಡಿದರೆಂದುಈ ಯೋಜನೆಯನ್ನು ಕೈಬಿಡಲಾಗುವುದಿಲ್ಲ. ಈ ಯೋಜನೆಯನ್ನು ಪಾರದರ್ಶಕವಾಗಿ ಜನರ ಮುಂದಿಡಲಿದ್ದೇವೆ. ಇದರಲ್ಲಿ ಭ್ರಷ್ಟಾಚಾರವಿದ್ದರೆ ಅದನ್ನು ಜನರೇ ಹೇಳಲಿ. ಅಭಿವೃದ್ಧಿ ಕೆಲಸಗಳಿಗೆ ಯಾರೇ ಅಡ್ಡ ಪಡಿಸಿದರು ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಯೋಜನೆಯಲ್ಲಿ ಏನೇ ವ್ಯತ್ಯಾಸವಿದ್ದರು ಜನರೇ ನೇರವಾಗಿ ಹೇಳಲಿ’ ಎಂದರು.
‘ಇನ್ನು, ನಗರದಲ್ಲಿ ಕುಡಿಯುವ ನೀರಿಗೆ ಬೇರೆ ಮಾರ್ಗಗಳ ಹುಡುಕಾಟ ನಡೆಯುತ್ತಿದೆ. ಕಾವೇರಿ ಐದನೇ ಹಂತ ಪೂರ್ಣಗೊಂಡರೆ ಕಾವೇರಿಯಿಂದ ನಗರಕ್ಕೆ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ಪರ್ಯಾಯ ಮಾರ್ಗದ ಅನಿವಾರ್ಯತೆ ಇದೆ’ ಎಂದರು.
‘ನಗರದಲ್ಲಿ ಎಲ್ಇಡಿ ಬಲ್ಬ್ ಅಳವಡಿಕೆಯಿಂದ ತಿಂಗಳಿಗೆ 18 ಕೋಟಿ ರು. ಉಳಿತಾಯವಾಗಲಿದೆ. ಕಳೆದ ಸಚಿವ ಸಂಪುಟದಲ್ಲಿ ಎಲ್ಇಡಿ ಬಲ್ಬ್ ಅಳವಡಿಕೆಗೆ ಒಪ್ಪಿಗೆ ನೀಡಲಾಗಿದೆ. ಒಟ್ಟಾರೆ ನಗರವನ್ನು ಅಂತಾರಾಷ್ಟ್ರೀಯ ಮಟ್ಟದ ಸಿಟಿಯನ್ನಾಗಿ ಮಾಡುವುದೇ ಸರಕಾರ ಉದ್ದೇಶ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.