ಬೆಂಗಳೂರು: ‘ನಂದಿನೆ ಕೆಫೆ ಮೂ’ ಪಾರ್ಲರ್ಗಳನ್ನು ರಾಷ್ಟ್ರೀಯ ಹೆದ್ದಾರಿಗಳಿಗೂ ವಿಸ್ತರಿಸಲು ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ಮುಂದಾಗಿದ್ದು, ಹೆದ್ದಾರಿಯಲ್ಲಿ ನಿರ್ಮಿಸಿರುವಕೆಫೆಗೆ ಗುರುವಾರ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನಂದಿನಿ ಬ್ರಾಂಡ್ನ ಎಲ್ಲ ಉತ್ಪನ್ನಗಳು ಹಾಗೂ ವಿವಿಧ ಸ್ವಾದದ ಐಸ್ಕ್ರೀಂ ಉತ್ಪನ್ನಗಳ ಜೊತೆಗೆ ಸ್ಕೂಪ್ ಮಾದರಿಯಲ್ಲಿಯೂ ಕೈಗೆಟಕುವ ದರದಲ್ಲಿ ಲಭ್ಯವಾಗಲಿದೆ ಎಂದು ಕೆಎಂಎಫ್ ತಿಳಿಸಿದೆ.
ಜಯನಗರ ಮತ್ತು ಕಸ್ತೂರಿನಗರದಲ್ಲಿ ಈ ಹಿಂದೆ ಎರಡು ಕೆಫೆಗಳನ್ನು ತೆರೆಯಲಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಕಾರಣ ಹೆದ್ದಾರಿಗಳಿಗೆ ವಿಸ್ತರಿಸಲಾಗುತ್ತಿದೆ ಎಂದು ವಿವರಿಸಿದೆ.
ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್. ರಾಮಚಂದ್ರ, ನಿರ್ದೇಶಕ ನಲ್ಲಿಗೆರೆ ಬಾಲು, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ಇದ್ದರು.