ಯಲಹಂಕ: ಬೆಂಗಳೂರು ಉತ್ತರ ಭಾಗದ ಜನರಿಗೆ ಅನುಕೂಲವಾಗುವಂತೆ ಎ.ಎಂ.ಚಾರಿಟಬಲ್ ಫೌಂಡೇಷನ್ ಮೂಲಕ ‘ಕೆಎಂಎಫ್’ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟದ ವಾಹನಕ್ಕೆ ಶಾಸಕ ಕೃಷ್ಣಬೈರೇಗೌಡ ಸಹಕಾರನಗರದಲ್ಲಿ ಚಾಲನೆ ನೀಡಿದರು.
‘ನಂದಿನಿ ಹಾಲಿನ ಉತ್ಪನ್ನಗಳನ್ನು ಕೊಳ್ಳಲು ಗ್ರಾಹಕರು ಅಂಗಡಿಗಳಿಗೆ ತೆರಳಬೇಕಾಗಿತ್ತು. ಆದರೆ ಈಗ ಉತ್ಪನ್ನಗಳನ್ನು ಒಳಗೊಂಡ ಮಾರಾಟ ವಾಹನವು ಪ್ರಮುಖ ರಸ್ತೆಗಳು ಮತ್ತು ಜನಸಂದಣಿ ಪ್ರದೇಶಗಳಲ್ಲಿ ಸಂಚರಿಸುವುದರಿಂದ ಗ್ರಾಹಕರು ಮನೆ ಬಳಿಯೇ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ’ ಎಂದು ತಿಳಿಸಿದರು.
ಫೌಂಡೇಷನ್ ನಿರ್ದೇಶಕ ವಿನೋದ್ ಕುಮಾರ್, ‘ಅಪಾರ್ಟ್ಮೆಂಟ್, ಉದ್ಯಾನ, ಹೈಕೋರ್ಟ್, ಜನವಸತಿ ಪ್ರದೇಶಗಳು, ಆಸ್ಪತ್ರೆ, ಸರ್ಕಾರಿ ಕಚೇರಿಗಳು, ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಈ ವಾಹನ ಸಂಚರಿಸಲಿದೆ’ಎಂದು ತಿಳಿಸಿದರು.
ವಾಹನದಲ್ಲಿ ಬ್ರೆಡ್, ಆಯುರ್ವೇದಿಕ್ ಮತ್ತು ಅರಿಷಿನಮಿಶ್ರಿತ ಹಾಲು, ಐಸ್ ಕ್ರೀಂ, ವಿವಿಧ ಬಗೆಯ ಸಿಹಿ ಪದಾರ್ಥ, ತಂಪಾದ ಪಾನೀಯಗಳು, ಪನ್ನೀರ್, ಬಟರ್ ಚೀಸ್ ಸೇರಿದಂತೆ ಸಿಹಿ ಮತ್ತು ಖಾರಾ ಪೊಂಗಲ್ ಜೊತೆಗೆ ಪಾಯಸ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಮುಖಂಡರಾದ ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ, ಪಳನಿ ವೆಂಕಟೇಶ್, ಎಚ್.ಎ.ಶಿವಕುಮಾರ್, ಗೌರೀಶ್, ಕೃಷ್ಣ ಉಪಸ್ಥಿತರಿದ್ದರು.