ಬೊಮ್ಮನಹಳ್ಳಿ: ‘ರಾಷ್ಟ್ರೀಯ ಶಿಕ್ಷಣ ನೀತಿಯು ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಪ್ರತಿಪಾದಿಸುವ ಜತೆಗೆ ಮಾತೃಭಾಷಾ ಶಿಕ್ಷಣಕ್ಕೆ ಒತ್ತು ನೀಡಿದೆ’ ಎಂದು ಕೇಂದ್ರದ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕಿಶನ್ರೆಡ್ಡಿ ಅಭಿಪ್ರಾಯಪಟ್ಟರು.
ಬುಧವಾರ ಕೋರಮಂಗಲದ ರೆಡ್ಡಿ ಜನ ಸಂಘ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಚೀನಾ, ಫ್ರಾನ್ಸ್, ಜಪಾನ್ ಸೇರಿದಂತೆ ಮುಂದುವರಿದ ಅನೇಕ ರಾಷ್ಟ್ರಗಳು ಮಾತೃಭಾಷೆಯಲ್ಲಿ ಶಿಕ್ಷಣ ನೀಡುತ್ತಿವೆ. ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಬೇಕು. ಆದರೆ, ಇಂಗ್ಲಿಷ್ ವ್ಯಾಮೋಹದಲ್ಲಿ ತಾಯಿ ಭಾಷೆಯನ್ನು ಮರೆಯಬಾರದು. ಭಾಷೆಯ ರಕ್ಷಣೆ ಪ್ರತಿಯೊಬ್ಬರ ಆದ್ಯತೆಯಾಗಬೇಕು’ ಎಂದರು.
‘ಜಗತ್ತಿನ ಮುಂದುವರಿದ ದೇಶ ಗಳು ಬೆಳವಣಿಗೆಯ ತುತ್ತತುದಿಯನ್ನು ಮುಟ್ಟಿವೆ. ಈ ದೇಶಗಳು ಮತ್ತಷ್ಟು ಬೆಳವಣಿಗೆ ಸಾಧಿಸುವುದು ಅಸಾಧ್ಯ. ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ಯುವಜನತೆಯಿಂದ ಕೂಡಿದ್ದು, ಕೇಂದ್ರದಲ್ಲಿ ಯಾವುದೇ ಸರ್ಕಾರ ಬರಲಿ. 2047ರ ಹೊತ್ತಿಗೆ ಭಾರತ ವಿಶ್ವದ ಸೂಪರ್ ಪವರ್ ಆಗಲಿದೆ. ಈ ದಿಸೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮುಂಬರುವ 25 ವರ್ಷಗಳ ಅಭಿವೃದ್ಧಿಯ ನೀಲನಕ್ಷೆಯೊಂದಿಗೆ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ಆರ್ಜೆಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಯರಾಮ ರೆಡ್ಡಿ, ಶಾಸಕ ಸತೀಶ್ ರೆಡ್ಡಿ, ಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೃಷ್ಣಾರೆಡ್ಡಿ ಇದ್ದರು.