ಬೆಂಗಳೂರು: ತಮ್ಮ ಬಳಿಯ ಹಳೇ ಹಾಸಿಗೆ ಮಾರಾಟಕ್ಕಾಗಿ ಓಎಲ್ಎಕ್ಸ್ ಜಾಲತಾಣದಲ್ಲಿ ಜಾಹೀರಾತು ನೀಡಿದ್ದ ಮಹಿಳೆಯರಿಬ್ಬರು ₹ 1 ಲಕ್ಷ ಕಳೆದುಕೊಂಡಿದ್ದು, ಈ ಸಂಬಂಧ ಪ್ರತ್ಯೇಕವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ಜಾಲತಾಣದ ಮೂಲಕ ಆದ ವಂಚನೆ ಬಗ್ಗೆ ಕಸವನಹಳ್ಳಿ ನಿವಾಸಿ ತೇಜಸ್ವಿ ಸಿಂಗ್ ಮತ್ತು ಸಪ್ನಾ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಕನ್ಹಯ್ಯ ಕುಮಾರ್ ಮತ್ತು ಉದಯ್ ಭಾನುಸಿಂಗ್ ಎಂಬುವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ವೈಟ್ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆ ಪೊಲೀಸರು ಹೇಳಿದರು.
‘ದೂರುದಾರರು ನೀಡಿದ್ದ ಜಾಹೀರಾತು ಗಮನಿಸಿದ್ದ ಆರೋಪಿಗಳು, ಹಾಸಿಗೆ ಖರೀದಿಸುವುದಾಗಿ ಹೇಳಿ ಪರಿಚಯಿಸಿಕೊಂಡಿದ್ದರು. ಆನ್ಲೈನ್ ಮೂಲಕ ಮುಂಗಡವಾಗಿ ಹಣ ಸಂದಾಯ ಮಾಡುವುದಾಗಿ ಹೇಳಿ ಕ್ಯೂಆರ್ ಕೋಡ್ ಕಳುಹಿಸಿದ್ದರು. ಅದನ್ನು ದೂರುದಾರರು ಸ್ಕ್ಯಾನ್ ಮಾಡುತ್ತಿದ್ದಂತೆ ಖಾತೆಯಿಂದ ಹಣ ಕಡಿತವಾಗಿದೆ.’
‘ಗ್ರಾಹಕರ ಸೋಗಿನಲ್ಲಿ ಪರಿಚಯ ಮಾಡಿಕೊಂಡು ವಂಚಿಸುವ ಜಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದೆ. ಯಾವುದೇ ವಸ್ತು ಮಾರಾಟ ಹಾಗೂ ಖರೀದಿ ಮಾಡುವಾಗ ಸಂಬಂಧಪಟ್ಟವರ ಖಾತೆಗಳನ್ನು ಪರಿಶೀಲಿಸಿ ವ್ಯವಹರಿಸುವುದು ಉತ್ತಮ’ ಎಂದೂ ಪೊಲೀಸರು ತಿಳಿಸಿದರು.