ಬೆಂಗಳೂರು: ಕಾಂಗ್ರೆಸ್ ಪಕ್ಷ ಹೊರಗಿನಿಂದ ಸುಮಾರು ನಾಲ್ಕು ಸಾವಿರ ಜನರನ್ನು ಕರೆದುಕೊಂಡು ಬಂದಿದ್ದು, ಅವರು ಆರ್.ಆರ್.ನಗರದಲ್ಲಿ ಭೀತಿ ಸೃಷ್ಟಿಸುತ್ತಿದ್ದಾರೆ ಎಂದು ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ದೂರಿದ್ದಾರೆ.
ಹೊರಗಿನಿಂದ ಬಂದ ಜನರಿಂದ ಮತದಾರರ ಗುರುತಿನ ಚೀಟಿಯನ್ನು ಸಂಗ್ರಹಿಸುತ್ತಿದ್ದಾರೆ. ಇದರಲ್ಲಿ ಚುನಾವಣಾ ರಾಜಕೀಯಕ್ಕಿಂತ ವೈಯಕ್ತಿಕ ದ್ವೇಷವೇ ಎದ್ದು ಕಾಣಿಸುತ್ತಿದೆ ಎಂದು ಅವರು ಪ್ರಚಾರದ ವೇಳೆ ಆರೋಪಿಸಿದ್ದಾರೆ.
‘ಹಿಂದೆ ಯಾವುದೇ ಚುನಾವಣೆಯಲ್ಲಿ ಇಂತಹ ಸ್ಥಿತಿ ಇರಲಿಲ್ಲ. ಈ ಭಾರಿ ಪರಿಸ್ಥಿತಿಯೇ ಭಿನ್ನವಾಗಿದೆ. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡುತ್ತೇನೆ. ಪರಿಸ್ಥಿತಿ ಹೀಗೆ ಬಿಟ್ಟರೆ ಮುಂದೆ ಸ್ಥಳೀಯರಿಗೆ ಕಷ್ಟವಾಗುತ್ತದೆ. ಚುನಾವಣೆ ಸುಲಲಿತವಾಗಿ ನಡೆಸಲು ಮಿಲಿಟರಿಯೇ ಬೇಕಾಗಬಹುದು’ ಎಂದೂ ಅವರು ಹೇಳಿದರು.
ಸಚಿವರ ಭರಾಟೆಯ ಪ್ರಚಾರ: ಕಂದಾಯ ಸಚಿವ ಆರ್.ಅಶೋಕ, ವಸತಿ ಸಚಿವ ವಿ.ಸೋಮಣ್ಣ, ಆಹಾರ ಸಚಿವ ಕೆ.ಗೋಪಾಲಯ್ಯ ಅವರು ಪ್ರತ್ಯೇಕವಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಮುನಿರತ್ನ ಪರವಾಗಿ ಮತಯಾಚಿಸಿದರು. ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಪ್ರಚಾರ ಮಾಡಿದರು.