ಬೆಂಗಳೂರು: ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಐಟಿ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಉತ್ತರಹಳ್ಳಿಯಲ್ಲಿರುವ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಶುಕ್ರವಾರ ಸಂವಾದ ನಡೆಸಿದರು.
‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ‘ಯುವಕರು ನಮ್ಮ ಪ್ರಗತಿಯ ನೇತಾರರು. ನವ ಭಾರತ ನಿರ್ಮಾಣದಲ್ಲಿ ಇವರ ಪಾತ್ರ ಅತ್ಯಂತ ಪ್ರಮುಖ’ ಎಂದು ಹೇಳಿದರು.
‘ಪರೀಕ್ಷಾ ಪೆ ಚರ್ಚಾ’ ಪ್ರಧಾನ ಮಂತ್ರಿಯವರ ದೂರದೃಷ್ಟಿ ಕಾರ್ಯಕ್ರಮವಾಗಿದ್ದು, ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಬಳಿ ತೆರಳಿ, ಪರೀಕ್ಷೆಯ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶ ಇದು ಎಂದರು.
‘ಪರೀಕ್ಷಾ ಯೋಧರು’ ಘೋಷವಾಕ್ಯದಡಿ ಮಕ್ಕಳ ರಚನೆಯ ಚಿತ್ರಪ್ರದರ್ಶನವನ್ನು ಸಚಿವರು ವೀಕ್ಷಿಸಿದರು. ಚಿತ್ರಕಲಾ ಪರಿಷತ್ನ ತಜ್ಞರು ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಎಎಂಡಿ ಇಂಡಿಯಾ ಮುಖ್ಯಸ್ಥರಾದ ಜಯಾ ಜಗದೀಶ್, ಇಂಟೆಲ್ ಇಂಡಿಯಾದ ಮುಖ್ಯಸ್ಥರಾದ ನಿವೃತಿ ರಾಯ್, ಕೂ ಇಂಡಿಯಾದ ಸಿಇಒ ಅಪ್ರಮೇಯ, ಶಾಸಕ ಎಂ. ಕೃಷ್ಣಪ್ಪ ಇದ್ದರು.
ಎನ್ಎಸಿಐಎನ್ ಕಾಂಪ್ಲೆಕ್ಸ್ನಲ್ಲಿ ನಡೆದ ರೋಜ್ಗಾರ್ ಮೇಳದಲ್ಲಿ ಭಾಗವಹಿಸಿದ್ದ ಸಚಿವ ರಾಜೀವ್ ಚಂದ್ರಶೇಖರ್, ‘ಕೆಲಸ ಎಂದರೆ ಜನಸೇವೆ ಹಾಗೂ ದೇಶ ಸೇವೆ’ ಎಂದರು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ 71 ಸಾವಿರ ಹೊಸ ಉದ್ಯೋಗಿಗಳಿಗೆ ನೇಮಕ ಪತ್ರ ನೀಡಲಾಯಿತು. ಸಂಸದ ಸದಾನಂದ ಗೌಡ ಇದ್ದರು.