ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಇಎಸ್‌: ಗಾಂಧಿ ಕುರಿತು ಕಡ್ಡಾಯ ಅಧ್ಯಯನ

ಮಹಾತ್ಮನ 150ನೇ ಜನ್ಮದಿನ– ಆಳೆತ್ತರದ ಕಂಚಿನ ಪ್ರತಿಮೆ
Last Updated 30 ಸೆಪ್ಟೆಂಬರ್ 2019, 10:50 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಗರದ ಪಿಇಎಸ್‌ ವಿಶ್ವವಿದ್ಯಾಲಯವು ತನ್ನ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಮತ್ತು ಸರ್‌. ಎಂ. ವಿಶ್ವೇಶ್ವರಯ್ಯ ಅವರ ಜೀವನ ಕುರಿತ ಅಧ್ಯಯನವನ್ನು ಕಡ್ಡಾಯಗೊಳಿಸಿದೆ.

‘ಯುವ ಪೀಳಿಗೆಗೆ ದೇಶದ ಮಹಾನ್‌ ವ್ಯಕ್ತಿಗಳ ಬಗ್ಗೆ ಮಾಹಿತಿಯೇ ಇಲ್ಲದ ಸ್ಥಿತಿ ಇದೆ. ಕಡ್ಡಾಯವಾಗಿ ಇವರನ್ನು ಓದುವಂತೆ ಮಾಡಿ, ಕೊನೆಯಲ್ಲಿ ಪ್ರಮಾಣಪತ್ರ ನೀಡುವ ಪದ್ಧತಿಯನ್ನು ವಿಶ್ವವಿದ್ಯಾಲಯ ಜಾರಿಗೆ ತಂದಿದೆ. ವಿಶ್ವವಿದ್ಯಾಲಯದ ಮೌಲ್ಯವರ್ಧಿತ ಕಾರ್ಯಕ್ರಮ ಇದು’ ಎಂದು ಕುಲಾಧಿಪತಿ ಡಾ. ಎಂ. ಆರ್. ದೊರೆಸ್ವಾಮಿ ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗಾಂಧಿ ಅಧ್ಯಯನಕ್ಕೆ ಅಗತ್ಯವಾದ ಪುಸ್ತಕಗಳ ಮಹಾಭಂಡಾರವೇ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದೆ. ಬ್ರಿಟನ್‌ನಲ್ಲಿನ ಗ್ರಂಥಾಲಯ ಮಾದರಿಯಲ್ಲಿ ಅತ್ಯಾಧುನಿಕ ಗ್ರಂಥಾಲಯವನ್ನು ವಿಶ್ವವಿದ್ಯಾಲಯದ 13ನೇ ಮಹಡಿಯಲ್ಲಿ ನಿರ್ಮಿಸಲಾಗಿದೆ ಎಂದರು.

ಗಾಂಧಿ ಪ್ರತಿಮೆ:ವಿದ್ಯಾರ್ಥಿಗಳಲ್ಲಿ ಗಾಂಧಿ ತತ್ವ, ಮೌಲ್ಯಗಳ ಪ್ರಭಾವ ಬೀರುವ ಸಲುವಾಗಿ ಮಹಾತ್ಮನ ಆಳೆತ್ತರದ ಕಂಚಿನ ಪ್ರತಿಮೆಯನ್ನು ಬುಧವಾರ ರಿಂಗ್‌ ರಸ್ತೆಯ ಪಿಎಎಸ್‌ ವಿಶ್ವವಿದ್ಯಾಲಯದ ಆವರಣದಲ್ಲಿ ಅನಾವರಣಗೊಳಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯು ನೂತನ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಪಿಇಎಸ್‌ ವಿಶ್ವವಿದ್ಯಾಲಯಕ್ಕೆ 5 ಸ್ಟಾರ್‌ ರೇಟಿಂಗ್ ಕೊಟ್ಟಿದೆ ಎಂದು ಅವರು, ಜಂಟಿ ಅಧ್ಯಯನ, ವಿದ್ಯಾರ್ಥಿಗಳಿಗೆ ತರಬೇತಿಯಂತಹ ಕಾರ್ಯಕ್ರಮಗಳಿಗಾಗಿ ಜಪಾನ್‌ನ ಎಸ್‌ಬಿಎಕ್ಸ್‌ ಕಾರ್ಪೊರೇಷನ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಸಮರಸ: ವಿದ್ಯಾರ್ಥಿಗಳಿಗೆ ದೇಶದ ಶ್ರೇಷ್ಠ ಕಲಾವಿದರ ಪರಿಚಯ ಮಾಡುವ ಮತ್ತು ಆ ಮೂಲಕ ಅವರಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಸಲುವಾಗಿ ಇದೇ 5 ಮತ್ತು 6ರಂದು ‘ಸಮರಸ’ ಹೆಸರಿನಲ್ಲಿ ಎಂ.ಆರ್‌. ದೊರೆಸ್ವಾಮಿ ಆಡಿಟೋರಿಯಂನಲ್ಲಿ ಸಾಂಸ್ಕೃತಿಕ ಕಲಾ ವೈಭವ ನಡೆಯಲಿದೆ. 5ರಂದು ಸಂಜೆ 4ಕ್ಕೆ ಖ್ಯಾತ ವೀಣಾ ವಾದಕಿ ಡಾ. ಜಯಂತಿ ಕುಮಾರೇಶ್‌ ಉದ್ಘಾಟಿಸುವರು. 6ರಂದು ದಿನವಿಡೀ ಸಂಗೀತ, ನೃತ್ಯ ವೈಭವ ನಡೆಯಲಿದೆ ಎಂದರು.

ಕುಲಪತಿ ಡಾ. ಕೆ. ಎನ್‌. ಬಿ. ಮೂರ್ತಿ, ಪ್ರಾಚಾರ್ಯ ಡಾ. ಕೆ. ಎಸ್. ಶ್ರೀಧರ್, ವಿದ್ಯಾರ್ಥಿ ವ್ಯವಹಾರದ ಡೀನ್‌ ಡಾ. ಕೃಷ್ಣ ವೆಂಕಟ್ರಾಮನ್‌ ಇದ್ದರು.

₹ 35 ಲಕ್ಷದ ಉದ್ಯೋಗ
ಪಿಇಎಸ್‌ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಹಲವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಿ ಕೇವಲ 2 ತಿಂಗಳಲ್ಲೇ ಪ್ರತಿಷ್ಠಿತ ಕಂಪನಿಗಳಿಂದ ಉದ್ಯೋಗ ಅವಕಾಶ ದೊರೆತಿದೆ. ಆರು ಮಂದಿಗೆ ವಾರ್ಷಿಕ ತಲಾ ₹ 35 ಲಕ್ಷ ಸಂಬಳದ ಉದ್ಯೋಗದ ಭರವಸೆ ದೊರೆತಿದೆ. ಒಟ್ಟು 1,352 ಮಂದಿ ಅಂತಿಮ ವರ್ಷದಲ್ಲಿದ್ದು, ಈಗಾಗಲೇ 54 ಕಂಪನಿಗಳಿಂದ 726 ಉದ್ಯೋಗ ಅವಕಾಶಗಳು ದೊರೆತಿವೆ. ಅಸೆಂಚರ್ ಕಂಪನಿ ಒಂದೇ ದಿನ 306 ಮಂದಿಗೆ ಉದ್ಯೋಗದ ಭರವಸೆ ನೀಡಿದೆ.ಇನ್ನೂ 60ಕ್ಕಿಂತ ಅಧಿಕ ಕಂಪನಿಗಳು ಕ್ಯಾಂಪಸ್‌ ಸಂದರ್ಶನಕ್ಕೆ ಬರುವ ನಿರೀಕ್ಷೆ ಇದೆ ಎಂದು ಡಾ. ಎಂ. ಆರ್‌. ದೊರೆಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT