ಬೆಂಗಳೂರು: ಜೀವಂತ ಗುಂಡುಗಳಿದ್ದ ನಾಡಪಿಸ್ತೂಲ್ ಇಟ್ಟುಕೊಂಡು ರಸೆಲ್ ಮಾರುಕಟ್ಟೆಗೆ ಶಾಪಿಂಗ್ಗೆ ಬಂದಿದ್ದ ಶೇಖ್ ಮುಸ್ತಫಾ (22) ಎಂಬಾತ ಶಿವಾಜಿನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
‘ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮುಸ್ತಫಾ, ಇದೇ 7ರಂದು ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ. ಆತನನ್ನು ನೋಡಿ ಅನುಮಾನಗೊಂಡಿದ್ದ ಗಸ್ತು ಸಿಬ್ಬಂದಿ ವಿಚಾರಣೆ ನಡೆಸಿದಾಗಲೇ ಪಿಸ್ತೂಲ್ ಸಿಕ್ಕಿದೆ’ ಎಂದು ಪೊಲೀಸರು ಹೇಳಿದರು.
‘ಐದು ತಿಂಗಳ ಹಿಂದಷ್ಟೇ ಮುಂಬೈಗೆ ಹೋಗಿದ್ದ ಮುಸ್ತಫಾ ಅಲ್ಲಿಯೇ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿದ್ದ. ದುಬೈಗೆ ಹೋಗಲು ತೀರ್ಮಾನಿಸಿ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದ’ ಎಂದರು.
‘ಭಟ್ಕಳ, ಕುಮಟಾ ಹಾಗೂ ಸುತ್ತಮುತ್ತ ನಡೆದಿದ್ದ ದ್ವಿಚಕ್ರ ವಾಹನಗಳ ಕಳವು ಪ್ರಕರಣದಲ್ಲಿ ಮುಸ್ತಫಾ ಭಾಗಿಯಾಗಿರುವ ಮಾಹಿತಿ ಇದೆ. ಪಿಸ್ತೂಲ್ ಇಟ್ಟುಕೊಂಡು ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಬಗ್ಗೆಯೂ ಅನಮಾನವಿದೆ’ ಎಂದು ಹೇಳಿದರು.