ಬೆಂಗಳೂರು: ಆಹಾರವನ್ನು ತಲುಪಿಸುವ ಸಿಬ್ಬಂದಿ (ಡೆಲಿವರಿ ಬಾಯ್) ಮೇಲೆ ಕಲ್ಲಿನಿಂದ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಹಲ್ಲೆಗೀಡಾಗಿರುವ ಸಿಬ್ಬಂದಿ ಹಿರೇಮಠ ಎಂಬುವರು ದೂರು ನೀಡಿದ್ದಾರೆ. ಆಹಾರ ತಲುಪಿಸುವಂತೆ ಕೋರಿಕೆ ಸಲ್ಲಿಸಿದ್ದ ಗ್ರಾಹಕ ಭರತ್ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕಸ್ತೂರಿ ನಗರದ ಪಿಜ್ಜಾ ಕೇಂದ್ರದಲ್ಲಿ ಹಿರೇಮಠ ಕೆಲಸ ಮಾಡುತ್ತಾರೆ. ಜುಲೈ 28ರ ರಾತ್ರಿ ಆರೋಪಿ ಭರತ್, ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದ. ಪಿಜ್ಜಾ ತಲುಪಿಸಲು ದೊಡ್ಡ ಬಾಣಸವಾಡಿ ಬಳಿಯ ಮುನೇಶ್ವರ ದೇವಾಲಯ ಬಳಿಗೆ ಹಿರೇಮಠ ಹೋಗಿದ್ದರು. ಪಿಜ್ಜಾ ನೀಡಿದ ಬಳಿಕ ಬಿಲ್ ಪಾವತಿಸುವಂತೆ ಕೇಳಿದ್ದರು.’
‘ಮದ್ಯದ ಅಮಲಿನಲ್ಲಿದ್ದ ಆರೋಪಿಗಳು, ಬಿಲ್ ಕೊಡುವುದಿಲ್ಲವೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆಗ ಆರೋಪಿಗಳು, ಹಿರೇಮಠ ಅವರ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ್ದಾರೆ’ ಎಂದೂ ಮಾಹಿತಿ ನೀಡಿದರು.