ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ಫೀಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಚಾಲನೆ: ಟೋಕನ್ ಪಡೆದು ಪ್ರಯಾಣಿಸಿದ ಮೋದಿ

Last Updated 25 ಮಾರ್ಚ್ 2023, 19:23 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿರುವ ವೈಟ್‌ಫೀಲ್ಡ್ ಮೆಟ್ರೊ ರೈಲು ಮಾರ್ಗದಲ್ಲಿ ಭಾನುವಾರದಿಂದ ಸಂಚಾರ ಆರಂಭವಾಗಲಿದೆ.

ವೈಟ್‌ಫೀಲ್ಡ್ ನಿಲ್ದಾಣದಲ್ಲಿ ಉದ್ಘಾಟನೆ ಮಾಡಿದ ಅವರು, ಅಲ್ಲಿಂದ ಹೋಪ್‌ಫಾರ್ಮ್‌ ಚನ್ನಸಂದ್ರ, ಕಾಡುಗೋಡಿ ಟ್ರೀ ಪಾರ್ಕ್, ಪಟ್ಟಂದೂರು ಅಗ್ರಹಾರದ ಮೂಲಕ ಸಾಗಿ ಸತ್ಯಸಾಯಿ ಹಾಸ್ಟಿಟಲ್ ತನಕ ಮೋದಿ ಪ್ರಯಾಣ ಮಾಡಿದರು. ಲೋಕೊ ಪೈಲೆಟ್‌ ಪಿ.ಪ್ರಿಯಾಂಕಾ ಅವರು ಪ್ರಧಾನಿ ಪ್ರಯಾಣಿಸಿದ ಮೆಟ್ರೊ ರೈಲು ಚಾಲನೆ ಮಾಡಿದರು.

ಅಲ್ಲಿಂದ ಮತ್ತೆ ವೈಟ್‌ಫೀಲ್ಡ್‌ ತನಕ ರೈಲಿನಲ್ಲೇ ಮರಳಿದರು. ಆ ರೈಲನ್ನು ಲೋಕೊ ಪೈಲೆಟ್ ಪ್ರಿಯಾಂಕಾ ಬಳ್ಳಾರಿ ಅವರು ಚಾಲನೆ ಮಾಡಿದರು. ಎರಡೂ ರೈಲನ್ನೂ ಮಹಿಳಾ ಲೋಕೊ ಪೈಲೆಟ್‌ಗಳೇ ಚಾಲನೆ ಮಾಡಿದ್ದು ವಿಶೇಷ.

ನೇರಳೆ ಮಾರ್ಗದ ಪೂರ್ವ ಭಾಗದ ವಿಸ್ತರಿತ ಮಾರ್ಗ ಇದಾ ಗಿದ್ದು, 13.71 ಕಿಮೀ ಉದ್ದದ ಮಾರ್ಗವು ಐಟಿ ಕಾರಿಡಾರ್‌ಗೆ ನಗರವನ್ನು ಬೆಸೆಯುತ್ತದೆ. ನಿತ್ಯ ಒಂದೂವರೆ ಲಕ್ಷ ಪ್ರಯಾಣಿಕರು ಈ ಮಾರ್ಗವನ್ನು ಬಳಕೆ ಮಾಡಬಹುದು ಎಂದ ನಿರೀಕ್ಷೆ ಮಾಡಲಾಗಿದೆ.

ಹಸಿರು ಮಾರ್ಗ 30 ಕಿಲೋ ಮೀಟರ್ ಇದ್ದರೆ, ನೇರಳ ಮಾರ್ಗ 25.60 ಕಿ.ಮೀ ಇತ್ತು. ಶನಿವಾರ ವೈಟ್‌ಫೀಲ್ಡ್ ತನಕ ಮೆಟ್ರೊ ರೈಲು ಸಂಚರಿಸಿದ್ದರಿಂದ ಮೆಟ್ರೊ ಮಾರ್ಗದ ಜಾಲ 69.66 ಕಿಲೋ ಮೀಟರ್ ಆದಂತಾಗಿದೆ.

ದೇಶದಲ್ಲೇ ಅತಿ ದೊಡ್ಡ ಮೆಟ್ರೊ ಜಾಲ ಹೊಂದಿರುವ ನಗರ ಎಂದರೆ ದೆಹಲಿಯಾಗಿದ್ದು, ಎರಡನೇ ಸ್ಥಾನದಲ್ಲಿ ಹೈದರಾಬಾದ್ ಇತ್ತು. ಈಗ ಬೆಂಗಳೂರಿನ ‘ನಮ್ಮ ಮೆಟ್ರೊ’ ಹೈದರಾಬಾದ್‌ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ನಿರ್ಮಾಣ ಕಾರ್ಮಿಕರೊಂದಿಗೆ ಕುಶಲೋಪರಿ

ಮೆಟ್ರೊ ರೈಲು ಮಾರ್ಗದ ನಿರ್ಮಾಣ ಕಾಮಗಾರಿ ನಿರ್ವಹಿಸಿದ ಕಾರ್ಮಿಕರ ಜೊತೆಯಲ್ಲೇ ಕುಳಿತು ಪ್ರಧಾನಿ ಪ್ರಯಾಣ ಮಾಡಿದರು.

ಐವರು ಕಾರ್ಮಿಕರ ಮಧ್ಯದಲ್ಲಿ ಕುಳಿತು ಅವರೊಂದಿಗೆ ಕುಶಲೋಪರಿ ನಡೆಸಿದರು. ಪ್ರಧಾನಿಯೊಂದಿಗೆ ಪ್ರಯಾಣಿಸಿದ ಕಾರ್ಮಿಕರು ಪುಳಕಿತರಾದರು. ಮಹಿಳಾ ಲೋಕೊ ಪೈಲೆಟ್‌ಗಳ ಜತೆಯೂ ಪ್ರಧಾನಿ ಸಮಾಲೋಚನೆ ನಡೆಸಿದರು. ವಿದ್ಯಾರ್ಥಿಗಳೊಂದಿಗೆ ನಿಂತು ಪ್ರಧಾನಿ ಪ್ರಯಾಣಿಸಿದರು.

ವೈಟ್‍ಫೀಲ್ಡ್ ನಿಲ್ದಾಣದ ಬಳಿ ನೆರೆದಿದ್ದ ಸಾವಿರಾರು ಮಂದಿ ಬಿಜೆಪಿ ಬೆಂಬಲಿಗರು ಪ್ರಧಾನಿ ಅವರನ್ನು ಸ್ವಾಗತಿಸಿದರು.

ವಾಣಿಜ್ಯ ಸಂಚಾರ ಇಂದಿನಿಂದ

ಬೆಳಿಗ್ಗೆ 7 ಗಂಟೆಯಿಂದ ವೈಟ್‌ಫೀಲ್ಡ್ ಮತ್ತು ಕೆ.ಆರ್.ಪುರ ನಡುವೆ ರೈಲುಗಳ ಕಾರ್ಯಾಚರಣೆ ಮಾಡಲಿವೆ. ಕೊನೆಯ ರೈಲು ಎರಡೂ ನಿಲ್ದಾಣಗಳಿಂದ ರಾತ್ರಿ 11 ಗಂಟೆಗೆ ಹೊರಡಲಿವೆ. ಸೋಮವಾರದಿಂದ ಬೆಳಿಗ್ಗೆ 5 ಗಂಟೆಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ.

ಈ ಭಾಗದಲ್ಲಿ ಪ್ರಯಾಣಿಸುವ ಜನ ಪ್ರತ್ಯೇಕ ಟೋಕನ್‌ಗಳು, ಮೊಬೈಲ್ ಕ್ಯೂಆ‌ರ್‌ ಟಿಕೆಟ್‌ಗಳನ್ನು ಖರೀದಿಸಿ ಪಯಣಿಸಬಹುದು. ಸ್ಮಾರ್ಟ್ ಕಾರ್ಡ್ ಹೊಂದಿರುವವರು ಕೂಡ ಪ್ರಯಾಣ ಮಾಡಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಟಿಸಿಯಿಂದ 195 ಫೀಡರ್ ಬಸ್

ನೇರಳೆ ಮಾರ್ಗವನ್ನು ವೈಟ್‌ಫೀಲ್ಡ್ ತನಕ ವಿಸ್ತರಣೆ ಮಾಡಿದ್ದರೂ ಪೂರ್ಣಪ್ರಮಾಣದಲ್ಲಿ ಈ ಮಾರ್ಗದ ಕಾಮಗಾರಿ ಪೂರ್ಣಗೊಂಡಿಲ್ಲ.

ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರ ನಡುವೆ ಮೂರು ಕಿಲೋ ಮೀಟರ್‌ನಷ್ಟು ಕಾಮಗಾರಿ ಪ್ರಗತಿಯಲ್ಲಿದೆ. 195 ಬಸ್‌ಗಳನ್ನು ಈ ಮಾರ್ಗದಲ್ಲಿ ಫೀಡರ್ ಸೇವೆಯಾಗಿ ಬಿಎಂಟಿಸಿ ಒದಗಿಸಿದೆ.

ಬೈಯಪ್ಪನಹಳ್ಳಿ ಮತ್ತು ಕೆ.ಆರ್.ಪುರ ನಡುವೆ ಬೆನ್ನಿಗಾನಹಳ್ಳಿ ನಿಲ್ದಾಣ ಇದೆ. ಉಳಿಕೆ ಕಾಮಗಾರಿ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ತಯಾರಿ ಮಾಡಿಕೊಂಡಿದೆ.

ಬೆಂಗಳೂರಿಗೆ ಎನ್‌ಸಿಎಂಸಿ ಕಾರ್ಡ್‌

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಬಳಕೆಗೆ ಈ ಮಾರ್ಗದಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಮಾರ್ಚ್ 30ರಿಂದ ಈ ಕಾರ್ಡ್‌ ಬಳಸಬಹುದಾಗಿದೆ.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಕಾರ್ಡ್ ಪರಿಚಯಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮೊದಲ ಕಾರ್ಡ್ ಬಳಸಿ ಪ್ರಯಾಣ ಮಾಡಿದರು.

ಈ ಕಾರ್ಡ್‌ ಪಡೆಯದೇ ಬಂದ ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಇನ್ನೇನು ಪ್ರವೇಶ ದಾಟಬೇಕು ಎನ್ನುವಷ್ಟರಲ್ಲಿ ಅದರ ರೆಕ್ಕೆಗಳು ಬಿಚ್ಚಿಕೊಂಡು, ತಡೆಯೊಡ್ಡಿದವು. ಹಿಂದೆ ಇದ್ದ ಅಧಿಕಾರಿಗಳು ಬೇರೆ ಕಡೆಯಿಂದ ಗೇಟ್‌ ತೆಗೆದು ಅವರನ್ನು ಕರೆದುಕೊಂಡು ಹೋದರು.

ಪ್ರಯಾಣಿಕರು ಈ ಕಾರ್ಡ್ ಬಳಕೆ ಮಾಡಲು ಕೌಂಟರ್‌ಗಳನ್ನು ತೆರೆಯಬೇಕಿದ್ದು, ಮೂರ್ನಾಲ್ಕು ದಿನಗಳ ಕಾಲಾವಕಾಶ ಬೇಕು ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT