ಬೆಂಗಳೂರು: ಪರಿಸರಕ್ಕೆ ಪೂರಕವಾದ ಹಸಿರು ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ನಗರದಲ್ಲಿ ಗುರುವಾರ ನಡೆದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
’ಜಲ ವಿದ್ಯುತ್ ಉತ್ಪಾದನೆ ಮಾಡಬೇಕಿದ್ದರೆ ನದಿಗಳಿಗೆ ಅಣೆಕಟ್ಟು ಕಟ್ಟಬೇಕು. ಅಲ್ಲಿ ವಾಸಿಸುವವರನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಮರಗಳನ್ನು ಕಡಿಯಬೇಕು. ಉಷ್ಣವಿದ್ಯುತ್ ಸ್ಥಾವರ ಮಾಡಬೇಕಿದ್ದರೆ ಕಲ್ಲಿದ್ದಲು ಬಳಸಬೇಕು. ಅಣು ವಿದ್ಯುತ್ ಸ್ಥಾವರ ಮಾಡಬೇಕಿದ್ದರೆ ವಿಕಿರಣಗಳಿಂದ ರಕ್ಷಿಸಬೇಕು. ಹೀಗೆ ಅನೇಕ ಸವಾಲುಗಳು ಎದುರಾಗುತ್ತವೆ. ಸೌರಶಕ್ತಿ ಮತ್ತು ಪವನಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡಿದರೆ ಅದರಿಂದ ತೊಂದರೆಗಳು ಬಹಳ ಕಡಿಮೆ’ ಎಂದು ಅವರು ವಿಶ್ಲೇಷಿಸಿದರು.
‘ಪರಿಸರಕ್ಕೆ ಪೂರಕವಾದ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ವಿದ್ಯುತ್ ನೀತಿ ರೂಪಿಸಲಾಗುವುದು’ ಎಂದು ಅವರು ತಿಳಿಸಿದರು.
‘ನಾವು ಯಾರಿಂದಲೂ ಲಂಚ ತೆಗೆದುಕೊಂಡು ವರ್ಗಾವಣೆಗಳನ್ನು ಮಾಡುವುದಿಲ್ಲ. ಪ್ರಾಮಾಣಿಕ ಅಧಿಕಾರಿಗಳು ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ತಯಾರಿರುತ್ತಾರೆ. ಅಂಥವರೇ ಇಲಾಖೆಯಲ್ಲಿ ಹೆಚ್ಚಿದ್ದಾರೆ’ ಎಂದು ಹೇಳಿದರು.
ಕೆಪಿಸಿಎಲ್ ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ನೌಕರರನ್ನು ಗೌರವಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.