ಬೆಂಗಳೂರು: ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನಿವೃತ್ತ ಇಪಿಎಸ್-95 ಸದಸ್ಯರ ಸಂಘ ಮತ್ತು ಇತರೆ ಸಂಘಟನೆಗಳ ವತಿಯಿಂದ ಕೇಂದ್ರ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಲಾಯಿತು.
‘ಕನಿಷ್ಠ ಪಿಂಚಣಿ ಹೆಚ್ಚಳ ಸಂಬಂಧ ಕೇಂದ್ರ ಸರ್ಕಾರದ ತಟಸ್ಥ ನಡೆಯನ್ನು ಖಂಡಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ (ಎನ್ಎಸಿ) ಅಧ್ಯಕ್ಷ ಅಶೋಕ್ ರಾವುತ್ ದೆಹಲಿಯಲ್ಲಿ ಆಂದೋಲನ ನಡೆಸಿದ್ದರು. ಬಳಿಕ ಸರದಿ ಉಪವಾಸ ಮುಷ್ಕರವನ್ನು ಕೈಗೊಂಡಿದ್ದರು. ಆಗ ಮಧ್ಯಪ್ರವೇಶಿಸಿದ್ದ ಕೇಂದ್ರಸರ್ಕಾರ ಕೆಲವೇ ದಿನಗಳಲ್ಲಿ ಕನಿಷ್ಠ ಪಿಂಚಣಿ ಸಹಿತ ತುಟ್ಟಿಭತ್ಯೆ ಮತ್ತು ವೈದ್ಯಕೀಯ ಸವಲತ್ತುಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದು ಭರವಸೆ ನೀಡಿದ್ದರು. ಭರವಸೆ 25 ದಿನ ಕಳೆದರೂ ಈಡೇರಿಲ್ಲ’ ಎಂದು ಆರೋಪಿಸಿದರು.
ದೇಶದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಇಪಿಎಫ್ಒ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ ಭವಿಷ್ಯನಿಧಿ ಆಯುಕ್ತರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಬಜೆಟ್ ಅಧಿವೇಶನದೊಳಗೆ ಸಮಸ್ಯೆ ಇತ್ಯರ್ಥಗೊಳಿಸದಿದ್ದರೆ ಮುಂದೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರಮಾಕಾಂತ ನರಗುಂದ, ಸ್ವಾಮಿ, ನಂಜುಂಡೇಗೌಡ, ಶಂಕರ್ ಕುಮಾರ್, ಸುಬ್ಬಣ್ಣ ಎಚ್ಚರಿಸಿದರು.