ರಾಜರಾಜೇಶ್ವರಿ ನಗರ: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳುತ್ತಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.
ರಾಮೋಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ರಾಮೋಹಳ್ಳಿಯಿಂದ ಮುಕ್ತಿನಾಗ ದೇವಾಲಯವರೆಗೆ ಕೈಗೊಂಡಿರುವ ರಸ್ತೆ ಅಭಿವೃದ್ಧಿ, ಬಯಲುರಂಗ ಮಂದಿರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ 100 ಕಿ.ಮೀ. ರಸ್ತೆ ಅಭಿವೃದ್ಧಿ, ಡಾಂಬರೀಕರಣ ಮಾಡಲು ನೀಲನಕ್ಷೆ ತಯಾರಾಗಿದೆ. ಗ್ರಾಮಗಳ ವ್ಯಾಪ್ತಿಯಲ್ಲಿ ಸಂಪೂರ್ಣ ಸಿಮೆಂಟ್ ರಸ್ತೆ, ಎರಡು ಬದಿಯಲ್ಲಿ ಚರಂಡಿ ಮಾಡಲಾಗುತ್ತದೆ ಎಂದರು.
ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿ.ವೇಣುಗೋಪಾಲ್ ಅಧ್ಯಕ್ಷತೆ ವಹಿಸಿ, ‘₹ 50 ಲಕ್ಷ ವೆಚ್ಚದಲ್ಲಿ ಕ್ಷೀರಭವನ ಹಾಗೂ ₹ 10 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಲಾಗುತ್ತಿದೆ’ ಎಂದರು. ಬಮೂಲ್ ನಿರ್ದೇಶಕ ಎಚ್.ಎಸ್.ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಲತಾ ಹನುಮಂತೇಗೌಡ ಇದ್ದರು.