ಕೈಕಾಲು ಕಟ್ಟಿ ಯುವಕನ ಕೊಲೆ: ಪ್ಲಾಸ್ಟಿಕ್ ಚೀಲದಲ್ಲಿ ಶವ ಪತ್ತೆ

ಬೆಂಗಳೂರು: ಕೈಕಾಲು ಕಟ್ಟಿ ಯುವಕನೊಬ್ಬನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹವನ್ನು ಸುತ್ತಿ ರಾಜಕಾಲುವೆ ಬಳಿ ಬಿಸಾಡಿ ಪರಾರಿಯಾಗಿದ್ದಾರೆ.
‘ದುಷ್ಕರ್ಮಿಗಳು ಯುವಕನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿದ್ದಾರೆ. ಬಾಯಿ ಹಾಗೂ ಮೂಗಿಗೆ ಪ್ಲಾಸ್ಟರ್ ಸುತ್ತಲಾಗಿದೆ. ಮೃತ ಯುವಕನಿಗೆ ಸುಮಾರು 25 ವರ್ಷ ವಯಸ್ಸಾಗಿರಬಹುದು. ಆತನ ಹೆಸರು ಮತ್ತು ವಿಳಾಸ ಗೊತ್ತಾಗಿಲ್ಲ. ಕುತ್ತಿಗೆ ಬಿಗಿದು ಕೊಲೆ ಮಾಡಿರಬಹುದು’ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
‘ಬೇರೆ ಕಡೆ ಕೊಲೆ ಮಾಡಿ ಮೃತದೇಹವನ್ನು ಠಾಣೆ ವ್ಯಾಪ್ತಿಯ ಡಿಸೋಜ ನಗರದ ರಾಜಕಾಲುವೆ ಬಳಿ ಬಿಸಾಡಿ ಹೋಗಿರುವ ಶಂಕೆ ಇದೆ. ಮಂಗಳವಾರ ಬೆಳಿಗ್ಗೆ ಚಿಂದಿ ಆಯುವ ವ್ಯಕ್ತಿಯೊಬ್ಬರು ಗೋಣಿಚೀಲ ಬಿದ್ದಿರುವುದನ್ನು ಕಂಡು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಅವರು ಠಾಣೆಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿತ್ತು. ಚೀಲ ತೆಗೆದು ನೋಡಿದಾಗ ಅದರಲ್ಲಿ ಮೃತದೇಹ ಪತ್ತೆಯಾಗಿತ್ತು’ ಎಂದು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.