ಬೆಂಗಳೂರು: ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಹಾಗೂ ಪೊಲೀಸ್ ಕಾನ್ಸ್ಟೆಬಲ್ ಉಷಾರಾಣಿ ಮೇಲಿನ ಹಲ್ಲೆ ಪ್ರಕರಣವನ್ನು ಇತ್ಯರ್ಥಪಡಿಸುವ ಪ್ರಯತ್ನಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂದಾಗಿದೆ.
ಹಲ್ಲೆ ನಡೆದಿದೆ ಎಂದು ದೂರು ನೀಡಿರುವ ಉಷಾರಾಣಿ ಮತ್ತು ಆರೋಪಿಗಳ ಪೈಕಿ ಒಬ್ಬರಾಗಿರುವ ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಅವರೊಂದಿಗೆ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್ ಈ ಸಂಬಂಧ ಸೋಮವಾರ ಮಾತುಕತೆ ನಡೆಸಿದ್ದಾರೆ.
ಉಷಾರಾಣಿ ಜೊತೆ ಮಧ್ಯಾಹ್ನ ಸುಮಾರು ಒಂದು ತಾಸು ಮಾತುಕತೆ ನಡೆಸಿದ ಪುರುಷೋತ್ತಮ್, ಸಂಜೆ ರಮೇಶ್ ಜೊತೆಯೂ ಚರ್ಚಿಸಿದರು. ನಂತರ ‘ಪ್ರಜಾವಾಣಿ’ ಜೊತೆ ಮಾತನಾಡಿ ‘ಸಚಿವರ ಸೂಚನೆ ಮೇರೆಗೆ ಮಾತುಕತೆ ನಡೆಸಿದ್ದೇನೆ. ಎರಡೂ ಕಡೆಯವರಿಂದ ವಿವರ ಪಡೆಯುವ ಪ್ರಯತ್ನ ಮಾಡಿದ್ದು ರಾಜಿ ಸಂಧಾನದ ಎಲ್ಲ ಸಾಧ್ಯತೆಗಳು ಇವೆ’ ಎಂದು ತಿಳಿಸಿದರು.
ಜ. 22ರಂದು ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಿರಿಯರ ಕಬಡ್ಡಿ ಶಿಬಿರದ ಸಂದರ್ಭದಲ್ಲಿ ಹಲ್ಲೆ ನಡೆದಿತ್ತು ಎಂದು ಉಷಾರಾಣಿ ಆರೋಪಿಸಿದ್ದರು. ಈ ಸಂಬಂಧ ರಮೇಶ್, ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ಮುನಿರಾಜು, ತರಬೇತುದಾರ ನರಸಿಂಹ ಮತ್ತು ಷಣ್ಮುಗಂ ಅವರನ್ನು ಪೊಲೀಸರು ಬಂಧಿಸಿದ್ದರು.
‘ಶಿಬಿರಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಅತಿಥಿಯಾಗಿ ಬಂದಿದ್ದರು. ಅವರನ್ನು ಆಟಗಾರ್ತಿಯರಿಗೆ ಉಷಾರಾಣಿ ಪರಿಚಯಿಸಿದ್ದರು. ಈ ವಿಷಯದಲ್ಲಿ ತಕರಾರು ಎತ್ತಿ ಹಲ್ಲೆ ನಡೆಸಲಾಗಿದೆ’ ಎಂದು ಉಷಾರಾಣಿ ದೂರಿನಲ್ಲಿ ತಿಳಿಸಿದ್ದರು.