ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಕೊಡಿಸುವ ನೆಪದಲ್ಲಿ ಅತ್ಯಾಚಾರ: ನಾಲ್ವರು ಆರೋಪಿಗಳ ಬಂಧನ

Last Updated 25 ಸೆಪ್ಟೆಂಬರ್ 2020, 23:19 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲಸ ಬೇಕಾಗಿದೆ’ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದ ಯುವತಿಯನ್ನು ಸಂಪರ್ಕಿಸಿ ಕೆಲಸ ಕೊಡಿಸುವ ಆಮಿಷವೊಡ್ಡಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಡಿ ನಾಲ್ವರನ್ನು ಸೋಲದೇವ ನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ರಾಜ್ (38), ಬಲರಾಮ್ (28), ಸಬಾಸ್ಟಿನ್ (24) ಮತ್ತು ಜಿತೇಂದ್ರ (26) ಬಂಧಿತರು. ಪಶ್ಚಿಮ ಬಂಗಾಳದ 24 ವರ್ಷದ ಯುವತಿ ದೂರು ನೀಡಿದ್ದರು.

‘ಕಳೆದ ವರ್ಷ ನಗರಕ್ಕೆ ಬಂದಿದ್ದ ಯುವತಿ, ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಕೆಲಸ ಹೋಗಿತ್ತು. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಅವರು, ಹೊಸ ಕೆಲಸಕ್ಕಾಗಿ ಹುಡುಕಾಡಿದ್ದರು. ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ, ‘ಕೆಲಸ ಬೇಕಾಗಿದೆ. ಯಾರಾದರೂ ಇದ್ದರೆ ತಿಳಿಸಿ’ ಎಂದು ಫೇಸ್‌ಬುಕ್‌ ಖಾತೆಯಲ್ಲಿ ಮೊಬೈಲ್ ನಂಬರ್ ಸಹಿತವಾಗಿ ಪೋಸ್ಟ್ ಪ್ರಕಟಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಸೆ. 14ರಂದು ಯುವತಿಗೆ ಕರೆ ಮಾಡಿದ್ದ ಆರೋಪಿ ರಾಜ್, ಕೆಲಸ ಕೊಡಿಸುವುದಾಗಿ ಹೇಳಿ ಗುಣಿ ಅಗ್ರಹಾರದಲ್ಲಿರುವ ಖಾಸಗಿ ಶಾಲೆಯೊಂದರ ಸಮೀಪ ಕರೆಸಿಕೊಂಡಿದ್ದ. ಅಲ್ಲಿಂದ ಯುವತಿಯನ್ನು ತನ್ನ ಶೆಡ್‌ಗೆ ಕರೆದೊಯ್ದಿದ್ದ. ಅಲ್ಲಿಯೇ ಆರೋಪಿಗಳೆಲ್ಲರೂ ಸೇರಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಸಂಗತಿ ಯುವತಿ ನೀಡಿದ್ದ ದೂರಿನಲ್ಲಿದೆ’ ಎಂದೂ ತಿಳಿಸಿದರು.

‘ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ ಆರೋಪಿಗಳು, ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಸಿದ್ದರು. ಯುವತಿಯನ್ನು ಯಲಹಂಕದಲ್ಲಿ ಬಿಟ್ಟು ಹೋಗಿದ್ದರು. ಅಸ್ವಸ್ಥಗೊಂಡಿದ್ದ ಯುವತಿ, ತಮ್ಮ ಸ್ನೇಹಿತರ ಮೂಲಕ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಹೊಯ್ಸಳ ಗಸ್ತು ವಾಹನದ ಸಿಬ್ಬಂದಿಯೇ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯಿಂದ ಹೇಳಿಕೆ ಪಡೆದಿದ್ದಾರೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT