ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿ ಜತೆ ಜತೆಗೇ ಪ್ರಮುಖವಾಗಿ ಎಂಜಿನಿಯರಿಂಗ್ ಕೋರ್ಸ್ಗಳಲ್ಲಿ ಸಮಸ್ಯಾ ಪರಿಹಾರ ಕಲಿಕಾ ಪದ್ಧತಿ (ಪಿಬಿಎಲ್) ಅಳವಡಿಸಲು ಇದು ಸಕಾಲ’ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷ ಡಾ.ಕೆ. ಕಸ್ತೂರಿ ರಂಗನ್ ಸಲಹೆ ನೀಡಿದರು.
ʼಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಲಿಕಾ ಪದ್ಧತಿʼ ಕುರಿತು ಶುಕ್ರವಾರ ಆನ್ಲೈನ್ನಲ್ಲಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜೊತೆಗೆ ವಾಸ್ತವ ಬದುಕಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನೂ ಕಲಿಯಬೇಕಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಉತ್ತೇಜಿಸುವ, ಭಾವನಾತ್ಮಕ, ಸೃಜನಾತ್ಮಕ ಮತ್ತು ನೈತಿಕ ಮೌಲ್ಯಗಳನ್ನೂ ಬೆಳೆಸುವ ಶಿಕ್ಷಣ ದೊರೆಯಬೇಕೆಂದರೆ ಪಿಬಿಎಲ್ ಅಳವಡಿಸಿಕೊಳ್ಳಬೇಕು’ ಎಂದರು.
'ಎನ್ಇಪಿಯು ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಜಾರಿಯಾಗುತ್ತಿದೆ. ಕೇಂದ್ರ ಸರ್ಕಾರ ಈ ನೀತಿಯನ್ನು ಪ್ರಕಟಿಸಿದ ಮೊದಲ ದಿನದಿಂದಲೇ ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ' ಎಂದು ಅವರು ಶ್ಲಾಘಿಸಿದರು.
'21ನೇ ಶತಮಾನದಲ್ಲಿ ಕರ್ನಾಟಕ ಸೇರಿ ಇಡೀ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ. ಆ ನಿಟ್ಟಿನಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ' ಎಂದರು.
ಯುನೆಸ್ಕೊ ಉತ್ಸುಕ:'ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಮತ್ತು ಆವಿಷ್ಕಾರ ಆಧಾರಿತ ಶಿಕ್ಷಣ ಪದ್ಧತಿ ಜಾರಿಗೆ ಭಾರತದೊಂದಿಗೆ ಕೈ ಜೋಡಿಸಲು ಯುನೆಸ್ಕೊ ಉತ್ಸುಕವಾಗಿದೆ' ಎಂದು ಯುನೆಸ್ಕೊದ 'ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಲಿಕಾ ಶಿಕ್ಷಣ ವಿಭಾಗ'ದ ಮುಖ್ಯಸ್ಥೆ ಪ್ರೊ.ಅನೆಟ್ ಕೊಲ್ಮಾಸ್ ಹೇಳಿದರು.
'ನಾವು ಪಡೆಯುವ ಅಥವಾ ಬೋಧಿಸುವ ಶಿಕ್ಷಣ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶ ಹೊಂದಿರಬೇಕಾದುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ತಾಂತ್ರಿಕ ಮತ್ತು ಆವಿಷ್ಕಾರ ಶಿಕ್ಷಣಕ್ಕೆ ಯುನೆಸ್ಕೊ ಹೆಚ್ಚು ಒತ್ತು ನೀಡುತ್ತಿದೆ' ಎಂದರು.
ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಸೇರಿದಂತೆ ದೇಶ- ವಿದೇಶಗಳ ತಜ್ಞರು ಭಾಗವಹಿಸಿದ್ದರು.
ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ಡೆನ್ಮಾರ್ಕ್ ನ ಅಲ್ಬೋರ್ಗ್ ವಿಶ್ವವಿದ್ಯಾಲಯದ ಯುನೆಸ್ಕೊ ಸೆಂಟರ್ ಫಾರ್ ಪ್ರಾಬ್ಲಮ್ ಬೇಸ್ಡ್ ಲರ್ನಿಂಗ್ ಇನ್ ಎಂಜಿನಿಯರಿಂಗ್ ಸೈನ್ಸ್ ಮತ್ತು ಸಸ್ಟೈನೆಬಿಲಿಟಿ ಸಹಯೋಗದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು.