ಬೆಂಗಳೂರು: ಜೀವನ್ಬಿಮಾನಗರ ಠಾಣೆ ವ್ಯಾಪ್ತಿಯಲ್ಲಿ ವೆಂಕಟೇಶ್ ಕೊಲೆಯಾಗಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
‘ನ್ಯೂ ತಿಪ್ಪಸಂದ್ರದ ಹನುಮಾನ್ ನಗರದ ಆರ್. ವಿನಯ್ (19) ಹಾಗೂ ಎಸ್. ಮೋಹನ್ (18) ಬಂಧಿತರು. ಕೊಲೆ ನಡೆದ 12 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿ ಮನೆಗೆ ಬಂದಿದ್ದ ವಿನಯ್, ಮಲಗುವ ಹಾಸಿಗೆ ವಿಚಾರವಾಗಿ ತನ್ನ ಸಹೋದರನ ಜೊತೆ ಜಗಳ ತೆಗೆದಿದ್ದ. ಸಂಬಂಧಿಯೂ ಆಗಿದ್ದ ವೆಂಕಟೇಶ್ ಜಗಳ ಬಿಡಿಸಲು ಬಂದಿದ್ದರು. ಅವರ ಜೊತೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು.’
‘ಸ್ನೇಹಿತ ಮೋಹನ್ನನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ ವಿನಯ್, ಗಲಾಟೆ ಮಾಡಲಾರಂಭಿಸಿದ್ದ. ಅದೇ ಸಂದರ್ಭದಲ್ಲೇ ವೆಂಕಟೇಶ್ ತಲೆಗೆ ದೊಣ್ಣೆಯಿಂದ ಹೊಡೆದಿದ್ದ. ಗಾಜಿನ ಚೂರುಗಳಿಂದ ಎದೆಗೆ ಹಲವು ಬಾರಿ ಇರಿದಿದ್ದ. ಇದರಿಂದ ತೀವ್ರ ಗಾಯಗೊಂಡು ವೆಂಕಟೇಶ್ ಮೃತಪಟ್ಟಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.
‘ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಯಿತು. ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ಹೇಳಿದರು.