ಕೆ.ಆರ್.ಪುರ: ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಡಾ.ರಾಜಕುಮಾರ್ ಅಭಿಮಾನಿ ಬಳಗ ಹಾಗೂ ಕೆ.ಆರ್.ಪುರ ಗ್ರಾಮಸ್ಥರಿಂದ ಶಿವಕುಮಾರ ಶ್ರೀಗಳ ದ್ವಿತೀಯ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.
ಕೆ.ಆರ್.ಪುರ ಸಬ್ ಇನ್ಸ್ಪೆಕ್ಟರ್ ವಂದನಾ, ‘ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರು ಎನಿಸಿದ್ದರು. ಅನ್ನ ದಾಸೋಹದ ಜೊತೆಗೆ ಅಕ್ಷರ ಕಲಿಸಿದವರು. ಅದೆಷ್ಟೋ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಅವರು ಜಗತ್ತಿಗೇ ಸಲ್ಲುವ ಮಹನೀಯರು’ ಎಂದರು.
ಪಿ.ಜೆ.ಅಂತೋಣಿಸ್ವಾಮಿ, ‘ನಿರ್ಗತಿಕರ ಮನದಾಳದಲ್ಲಿ ನೆಲೆಯೂರಿರುವ ಶ್ರೀಗಳು ಲಿಂಗೈಕ್ಯರಾಗಿ ಇಂದಿಗೆ ಎರಡು ವರ್ಷ ಕಳೆದಿವೆ. ಇಂತಹ ಪವಿತ್ರ ದಿನದಂದು ಶ್ರೀಗಳ ಪುಣ್ಯ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ’ ಎಂದರು.
ಕೆ.ಆರ್.ಪುರ ಗ್ರಾಮದ ಮುಖಂಡರಾದ ಶಿವಪ್ಪ, ರವಿಕುಮಾರ್, ಮರಿರಾಜು, ವೀರಭದ್ರಪ್ಪ, ಸಾಹುಕಾರ್ ಗಿರಿ, ನಿರಂಜನ್, ಕೆ.ಪಿ.ಕೃಷ್ಣ, ಡಾ.ಸುರೇಶ್, ವೇಣು ಇದ್ದರು.