ಯಲಹಂಕ: ‘ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜತೆಗೆ ಕೌಶಲಗಳನ್ನು ಬೆಳೆಸಿಕೊಂಡರೆ ಮಾತ್ರ ಸಂಶೋಧನೆ ಮತ್ತು ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಕಾಣಲು ಸಾಧ್ಯವಾಗುತ್ತದೆ’ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಚಾಲನಾ ಸಮಿತಿಯ(ಎಂ.ಇ.ಐ.ಟಿ.ವೈ) ಅಧ್ಯಕ್ಷ ಡಿ. ಅಲೋಕನಾಥ್ ಹೇಳಿದರು.
ರೇವಾ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ 2023ನೇ ಸಾಲಿನ ತಾಂತ್ರಿಕ ಮತ್ತು ಆರ್ಕಿಟೆಕ್ಚರ್ ಕೋರ್ಸ್ಗಳನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಹೊಸ–ಹೊಸ ಹಂತಗಳನ್ನು ಪ್ರವೇಶಿಸಿದಾಗ ಸಾಕಷ್ಟು ಸ್ವಾತಂತ್ರ್ಯ ಸಿಗುತ್ತದೆ. ಲಭ್ಯವಿರುವ ಎಲ್ಲ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು. ಇಂದಿನ ಯುವಕರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅವುಗಳ ಆಧಾರದ ಮೇಲೆ ದುಡುಕಿನ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಅವುಗಳನ್ನು ಮಿತವಾಗಿ ಬಳಕೆ ಮಾಡುವುದರ ಜತೆಗೆ ತಮ್ಮಲ್ಲಿರುವ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.
ಟಿ ಆ್ಯಂಡ್ ಐ, ಕಾಲಿನ್ಸ್ ಏರೋಸ್ಪೇಸ್ ನಿರ್ದೇಶಕ ಆದಿಶೇಷ, ‘ಇಂದು ಎಂಜಿನಿಯರ್ಗಳ ಪಾತ್ರ ಬಹಳ ಮುಖ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಅನ್ವೇಷಣೆ ಮಾಡಲು ಸಾಕಷ್ಟು ಅವಕಾಶಗಳಿವೆ’ ಎಂದು ಹೇಳಿದರು.
ವಿಶ್ವವಿದ್ಯಾಲಯ ಕುಲಪತಿ ಪಿ. ಶ್ಯಾಮರಾಜು, ‘ಭವಿಷ್ಯದ ನಾಯಕರನ್ನು ರೂಪಿಸಲು ರೇವಾ ವಿಶ್ವವಿದ್ಯಾಲಯವು ಸಮಗ್ರ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡುತ್ತಿದೆ’ ಎಂದರು.
ಚಂದ್ರಯಾನ-3 ಯಶಸ್ವಿ ಉಡಾವಣೆಯ ಭಾಗವಾಗಿದ್ದ ಹಳೆಯ ವಿದ್ಯಾರ್ಥಿಗಳಾದ ಕಿರಣ ದೇಸಾಯಿ, ವೆಂಕಟೇಶ್ವರ ರಾವ್, ಶಿಜಿನ್ ಕೆ.ಪಿ., ರೇಣುವೆಂಕಟ ಸ್ವಾಮಿ, ಬುಕ್ಯ ರಮೇಶ್, ಹರಿಕೃಷ್ಣ, ಲಿಪಿನ್, ವೇಣುಗೋಪಾಲ್ ಎಜ್ಜಗಿರಿ ಮತ್ತು ಮಂಗಲ್ ಮಹಾಪಾತ್ರ ಅವರನ್ನು ಸನ್ಮಾನಿಸಲಾಯಿತು.