ಬೆಂಗಳೂರು: ಅನ್ಯ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಎರವಲು ಸೇವೆ ಮೇಲೆ ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಗೆ ನೇಮಕ ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರಿ ಕಂದಾಯ ಇಲಾಖೆ ನೌಕರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
‘ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆಯು ತಾಲ್ಲೂಕು ಮ್ಯಾಜಿಸ್ಟ್ರೇಟ್ ಗ್ರೇಡ್ ಹುದ್ದೆಯಾಗಿದ್ದು, ಈ ಮೊದಲಿನಂತೆ ಕೆಪಿಎಸ್ಸಿ ನಡೆಸುವ ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನು ಮತ್ತು ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಅನುಭವ ಪಡೆದವರನ್ನು ಮಾತ್ರ ಈ ಹುದ್ದೆಗೆ ಪರಿಗಣಿಸಬೇಕು’ ಎಂದು ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
‘ಅನ್ಯ ಇಲಾಖೆಯಿಂದ ಬಂದು ರಾಜ್ಯದ ಹಲವೆಡೆ ತಹಶೀಲ್ದಾರ್ ಆಗಿ ಸೇವೆಸಲ್ಲಿಸುತ್ತಿರುವವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಿ, ಇದರಿಂದ ತೆರವಾಗುವ ಹುದ್ದೆಗಳಿಗೆ ಕಂದಾಯ ಇಲಾಖೆಯಲ್ಲಿ ಆರಂಭದಿಂದ ಸೇವೆ ಸಲ್ಲಿಸಿ ಮುಂಬಡ್ತಿ ಪಡೆವರನ್ನು ನೇಮಿಸಬೇಕು’ ಎಂದು ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.
ಸಂಘದ ಗೌರವ ಅಧ್ಯಕ್ಷ ಸಿದ್ದರಾಜು ಮದ್ದೂರು, ಹಿರಿಯ ಉಪಾಧ್ಯಕ್ಷ ರಾಜಶೇಖರಮೂರ್ತಿ, ಕಾರ್ಯದರ್ಶಿ ತಾವರೆಕೆರೆ ಕೆ. ಸಿದ್ದರಾಜು, ಖಜಾಂಚಿ ಕೆಂಪೇಗೌಡ ಇದ್ದರು.