ಬೆಂಗಳೂರು: ರೈಸ್ ಪುಲ್ಲಿಂಗ್ ನೆಪದಲ್ಲಿ ಉದ್ಯಮಿಯೊಬ್ಬರಿಂದ ₹ 2 ಕೋಟಿ ಪಡೆದು ವಂಚಿಸಿದ್ದ ನಾಲ್ವರು ಆರೋಪಿಗಳನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅದರ ಬೆನ್ನಲ್ಲೇ ಆರೋಪಿ ಸಂಬಂಧಿಯೊಬ್ಬರು, ‘ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ಆರೋಪಿಸಿದ್ದಾರೆ.
‘ವಂಚನೆ ಸಂಬಂಧ ಉದ್ಯಮಿ ಎನ್.ಪಿ.ಮಹೇಶ್ ಎಂಬುವರು ದೂರು ನೀಡಿದ್ದರು. ಅದರನ್ವಯ ಆರೋಪಿಗಳಾದ ಹೊಸೂರಿನ ಶಿವಕುಮಾರ್, ಗೋಪಾಲ್, ಮಹೇಶ್ ಅಲಿಯಾಸ್ ಮಹೇಂದ್ರ ಹಾಗೂ ನಾಗರಾಜ್ ಎಂಬುವರನ್ನು ಬಂಧಿಸಲಾಗಿದೆ’ ಎಂದು ಮಾರತ್ತಹಳ್ಳಿ ಪೊಲೀಸರು ಹೇಳಿದರು.
ಸಾರಿಗೆ ಉದ್ಯಮಿಯಾದ ಮಹೇಶ್ ಅವರನ್ನು 2019ರಲ್ಲಿ ಭೇಟಿಯಾಗಿದ್ದ ಆರೋಪಿಗಳು, ತಮ್ಮದೇ ಪಾಲುದಾರಿಕೆಯಲ್ಲಿ ಉದ್ಯಮವನ್ನು ಆಂಧ್ರಪ್ರದೇಶ ಹಾಗೂ ಇತರ ಸ್ಥಳಗಳಲ್ಲಿ ವಿಸ್ತರಣೆ ಮಾಡುವುದಾಗಿ ಹೇಳಿದ್ದರು.
‘ತಮ್ಮ ಬಳಿ ‘ರೈಸ್ ಪುಲ್ಲಿಂಗ್’ ಚೆಂಬು ಇದೆ ಎಂದು ಹೇಳಿದ್ದ ಆರೋಪಿಗಳು, ‘ಚೆಂಬು ಪರೀಕ್ಷೆ ಮಾಡಿಸಬೇಕು. ಅದರ ಖರ್ಚಿಗೆ ₹ 2 ಕೋಟಿ ಬೇಕು ಎಂದು ಕೇಳಿ ಹಣ ಪಡೆದು ವಂಚಿಸಿದ್ದರು.