ಬೆಂಗಳೂರು: ನಗರದಲ್ಲಿ ಮತ್ತೊಂದು ರಸ್ತೆ ಕುಸಿತ ಪ್ರಕರಣ ವರದಿಯಾಗಿದೆ. ಮಹಾಲಕ್ಷ್ಮೀ ಮೆಟ್ರೊ ಸ್ಟೇಷನ್ ಬಳಿ ಮಂಗಳವಾರ ಬೆಳಿಗ್ಗೆ ಲಾರಿಯೊಂದು ಸಾಗುವಾಗ ರಸ್ತೆ ಕುಸಿದಿದ್ದು ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಜನವರಿ 10ರಂದು ಹೆಣ್ಣೂರು ಕ್ರಾಸ್ ಬಳಿ ಮೆಟ್ರೊ ಪಿಲ್ಲರ್ ನಿರ್ಮಾಣಕ್ಕಾಗಿ ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಉರುಳಿಬಿದ್ದ ಪರಿಣಾಮ, ಪತಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ಪತ್ನಿ– ಮಗು ಮೃತಪಟ್ಟಿದ್ದರು.
ಇದರ ಬೆನ್ನಲ್ಲೇ ಬ್ರಿಗೇಡ್ ರಸ್ತೆಯಲ್ಲಿ ಮೆಟ್ರೊ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ದಿಢೀರ್ ರಸ್ತೆ ಕುಸಿದಿತ್ತು. ಗುಂಡಿಯಲ್ಲಿ ಬೈಕ್ ಬಿದ್ದು, ಸವಾರ ಪುನೀತ್ಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಇದೀಗ, ಮಹಾಲಕ್ಷ್ಮೀ ಲೇಔಟ್ ಬಳಿ ಮತ್ತೊಂದು ಪ್ರಕರಣ ವರದಿಯಾಗಿದ್ದು, ಕಳೆದ 15 ದಿನಗಳಲ್ಲಿ ಇದು ಮೆಟ್ರೊ ಕಾಮಗಾರಿ ಸಂಬಂಧಿತ ಮೂರನೇ ಅವಘಡವಾಗಿದೆ.