ಬೆಂಗಳೂರು: ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ರೌಡಿ ಸತೀಶ್ ಅಲಿಯಾಸ್ ಮಿಲ್ಟ್ರಿ (30) ಹತ್ಯೆಗೆ ಜೈಲಿನಿಂದ ಸುಪಾರಿ ನೀಡಿದ್ದ ಸಂಗತಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
‘ಮಾಯಾ ಬಜಾರ್ ನಿವಾಸಿ ಸತೀಶ್ನನ್ನು ಜ.24ರಂದು ಮನೆಗೆ ನುಗ್ಗಿ ಹತ್ಯೆ ಮಾಡಲಾಗಿತ್ತು. ಆರೋಪಿಗಳಾದ ಸುನೀಲ್ ಜೇಮ್ಸ್, ಕ್ಲೇಮೆಂಟ್, ಪ್ರಶಾಂತ್ ಹಾಗೂ ಧನುಷ್ನನ್ನು ಬಂಧಿಸಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಸತೀಶ್ ಹಾಗೂ ಇನ್ನೊಬ್ಬ ರೌಡಿ ಶಿವಕುಮಾರ್ ಅಲಿಯಾಸ್ ಬಬ್ಲಿ ನಡುವೆ ಹಳೇ ವೈಷಮ್ಯವಿತ್ತು. ಕೊಲೆ ಹಿಂದೆ ಶಿವಕುಮಾರ್ ಕೈವಾಡವಿರುವ ಶಂಕೆ ಇತ್ತು. ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಶಿವಕುಮಾರ್ ಹೆಸರು ಬಾಯ್ಬಿಟ್ಟಿದ್ದರು.’
‘ರೌಡಿ ಶಿವಕುಮಾರ್, ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಜೈಲಿನಲ್ಲಿದ್ದುಕೊಂಡೇ ಸತೀಶ್ನನ್ನು ಕೊಲೆ ಮಾಡಲು ಮೂರು ತಿಂಗಳಿನಿಂದ ಸಂಚು ರೂಪಿಸುತ್ತಿದ್ದ. ಇದಕ್ಕಾಗಿ ತನ್ನ ಸಹಚರರಿಗೆ ₹30 ಲಕ್ಷಕ್ಕೆ ಸುಪಾರಿ ನೀಡಿದ್ದ. ಶಿವಕುಮಾರ್ ಮಾತಿನಂತೆ ಆರೋಪಿಗಳು ಮನೆಗೆ ನುಗ್ಗಿ ಸತೀಶ್ನನ್ನು ಕೊಂದಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.