ರಾಜರಾಜೇಶ್ವರಿನಗರ:ಇಲ್ಲಿನ ಸರ್. ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿರುವ ರಾಮಸಂದ್ರ ಕೆರೆ ಹೂಳಿನಿಂದ ತುಂಬಿದ್ದು, ನೀರು ದುರ್ನಾತ ಬೀರುತ್ತಿದೆ. ಕೆರೆಯ ಸುತ್ತ–ಮುತ್ತಲಿನ ಜನ ನಿತ್ಯವೂ ನರಕಯಾತನೆ ಅನುಭವಿಸುವಂತಾಗಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ಈ ಕೆರೆ ನಿರ್ಮಿಸಲಾಗಿದೆ. ಕೆರೆಯ ಸುತ್ತ ತಂತಿ ಬೇಲಿ ಹಾಕಲಾಗಿದ್ದರೂ, ಅದನ್ನು ಕಿತ್ತುಹಾಕಿರುವ ಕಿಡಿಗೇಡಿಗಳು, ಕೆರೆಯಲ್ಲಿಮಾಂಸದ ತ್ಯಾಜ್ಯ ಸುರಿಯುತ್ತಿದ್ದಾರೆ. ಜೊಂಡು, ಬುಡ್ಡೇಸೊಪ್ಪು ಬೆಳೆದುಕೊಂಡು ಕಳೆ ಗಿಡಗಳು ಕೆರೆಯನ್ನು ಆವರಿಸಿಕೊಂಡಿವೆ.
ಮಳೆ ನೀರಿನ ಕಾಲುವೆಗಳಿಂದಲೇ ಕಲುಷಿತ ನೀರು ಕೆರೆಯನ್ನು ಸೇರುತ್ತಿದೆ. ಕಟ್ಟಡದ ತ್ಯಾಜ್ಯವನ್ನೂ ಈ ಕೆರೆಗೆ ಸುರಿಯಲಾಗುತ್ತಿದೆ.
‘ಬಿಡಿಎ ಅಧಿಕಾರಿಗಳು ಹಾಗೂ ಎಂಜಿನಿಯರುಗಳು ಇದೇ ರಸ್ತೆಯಲ್ಲಿ ಸಂಚರಿಸಿದರೂ ಈ ವಿಷಯಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಾರೆ’ ಎಂದು ಸ್ಥಳೀಯರು ದೂರುತ್ತಾರೆ.
‘ಪ್ರತಿಷ್ಠಿತ ಬಡಾವಣೆ ಎನ್ನುವ ಏಕೈಕ ಉದ್ದೇಶದಿಂದ ಲಕ್ಷಾಂತರ ರೂಪಾಯಿ ನೀಡಿ ನಿವೇಶನ ಖರೀದಿಸಿದ್ದೇವೆ. ಕನಸಿನ ಮನೆ ನಿರ್ಮಿಸಿಕೊಂಡು ವಾಸ ಮಾಡಲು ಮುಂದಾಗಿದ್ದೇವೆ. ಈಗ ಇಂತಹ ಕಲುಷಿತ ವಾತಾವರಣದಿಂದ, ನಮ್ಮ ಹಣಕ್ಕೆ ಬೆಲೆ ಇಲ್ಲದಂತಾಯಿತೇನೋ ಎಂಬ ಭಾವನೆ ಕಾಡುತ್ತಿದೆ’ ಎಂದು ನಿವೇಶನದಾರರು ಅಳಲು ತೋಡಿಕೊಳ್ಳುತ್ತಾರೆ.