ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದ ರನ್‍ವೇ ಕಾಮಗಾರಿ ಶೀಘ್ರ ಪೂರ್ಣ: ನಾರಾಯಣ ಗೌಡ

Last Updated 30 ಸೆಪ್ಟೆಂಬರ್ 2021, 12:15 IST
ಅಕ್ಷರ ಗಾತ್ರ

ಬೆಂಗಳೂರು: ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದ ರನ್‍ವೇ ಕಾಮಗಾರಿ ವಾರದೊಳಗೆ ಪೂರ್ಣಗೊಳ್ಳಲಿದೆ’ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.

ಕಾಮಗಾರಿಯ ಪ್ರಗತಿ ವೀಕ್ಷಿಸಿದ ಬಳಿಕ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಸಚಿವರು, ‘ಅತಿ ಶೀಘ್ರದಲ್ಲಿ ಸರ್ಕಾರಿ ವೈಮಾನಿಕ ಶಾಲೆ ಆರಂಭಿಸಲಾಗುವುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಉದ್ಘಾಟನೆಗೆ ಆಹ್ವಾನಿಸಲಾಗುವುದು’ ಎಂದರು.

‘ಈಗಾಗಲೇ 34 ವಿದ್ಯಾರ್ಥಿಗಳು ವೈಮಾನಿಕ ಚಾಲನಾ ತರಬೇತಿ ಪಡೆಯಲು ಪ್ರವೇಶ ಪಡೆದಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆದು, ಉತ್ತಮ ಉದ್ಯೋಗ ಅವಕಾಶ ಕಲ್ಪಿಸುವುದು ಉದ್ದೇಶ’ ಎಂದರು.

‘ಜಕ್ಕೂರು ವೈಮಾನಿಕ ತರಬೇತಿ ಶಾಲೆಯನ್ನು ಮುಚ್ಚುವ ಹುನ್ನಾರ ನಡೆದಿತ್ತು. ಆದ್ದರಿಂದಲೇ ನಾಲ್ಕು ವರ್ಷವಾದರೂ ಪುನಾರಂಭಿಸುವ ಪ್ರಯತ್ನ ನಡೆದಿರಲಿಲ್ಲ. ಇಲ್ಲಿ ಬೋಧಕ ಸಿಬ್ಬಂದಿ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡುವ ಕೆಲಸ ಮಾಡಿಲ್ಲ. ರನ್‍ವೇಗೆ ಅಗತ್ಯವಿರುವ ಜಾಗ ವಶಪಡಿಸಿಕೊಳ್ಳುವ ಕೆಲಸವನ್ನೂ ಮಾಡಿಲ್ಲ. ಡಿಜಿಸಿಎ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದರೂ ಯಾರೂ ತಲೆಕೆಡಿಸಿಕೊಂಡಿಲ್ಲ. ನಾನು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಹಂತಹಂತವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದೇನೆ’ ಎಂದರು.

‘ಜಕ್ಕೂರು ಏರೋಡ್ರೋಮ್‍ಗೆ ಸೇರಿದ ಜಾಗವನ್ನು ರಾಷ್ಟ್ರೀಯ ಹೆದ್ದಾರಿಗೆ ನೀಡಲಾಗಿತ್ತು. ಪರಿಹಾರದ ಮೊತ್ತ ₹ 10 ಕೋಟಿ ಮಾತ್ರ ನೀಡಿದ್ದಾರೆ. ₹ 13 ಕೋಟಿ ಬಡ್ಡಿ ಹಣ ಬರಬೇಕಿದೆ. ಅದನ್ನೂ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ರನ್‍ವೇ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ರನ್‍ವೇಗೆ ಇನ್ನೂ 3 ಎಕರೆ ಜಾಗದ ಅಗತ್ಯವಿದೆ. ಅದನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಡಿಜಿಸಿಎ ನಿಯಮ ಮೀರಿ ಏರೋಡ್ರೋಮ್‍ನ 5 ಕಿ.ಮಿ. ವ್ಯಾಪ್ತಿಯಲ್ಲಿ 45 ಮೀಟರ್‌ಗಿಂತ ಹೆಚ್ಚು ಎತ್ತರಕ್ಕೆ ನಿರ್ಮಿಸಿದ ಕಟ್ಟಡಗಳನ್ನು ಗುರುತಿಸಲು ಬಿಬಿಎಂಪಿ ಜೊತೆ ಜಂಟಿ ಸರ್ವೆ ನಡೆಯುತ್ತಿದೆ. ಶೀಘ್ರದಲ್ಲೇ ಸರ್ವೆ ಮುಗಿಸಿ, ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತೇನೆ’ ಎಂದರು.

‘ಖಾಸಗಿ ವೈಮಾನಿಕ ಕಂಪನಿಗಳಿಂದ ಬರಬೇಕಾಗಿದ್ದ ಬಾಡಿಗೆ ಸ್ವಲ್ಪ ಪ್ರಮಾಣದಲ್ಲಿ ವಸೂಲಾಗಿದೆ. ಸಂಪೂರ್ಣ ವಸೂಲಿ ಮಾಡಿದ ಬಳಿಕ ಅವರಿಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗುವುದು. ಖಾಸಗಿ ಕಂಪನಿಗಳಿಂದ ಒತ್ತುವರಿಯಾದ ಜಾಗವನ್ನೂ ತೆರವು ಮಾಡಿ ಸರ್ಕಾರದ ವಶಕ್ಕೆ ಪಡೆಯಲಾಗುತ್ತಿದೆ’ ಎಂದು ಅವರು ವಿವರಿಸಿದರು.

‘ಯಾರೋ ಮಾಡಿದ ಹುನ್ನಾರದಿಂದ ಅತ್ಯಂತ ಪ್ರಮುಖವಾಗಿರುವ ಏರೋಡ್ರೋಮ್‍ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನೂರಾರು ಕೋಟಿ ರೂಪಾಯಿ ಆದಾಯದ ನೂರಾರು ಎಕರೆ ಭೂಮಿ, ಬೆಲೆ ಕಟ್ಟಲಾಗದ ವೈಮಾನಿಕ ತರಬೇತಿ ಶಾಲೆ, ಹೀಗೆ ಎಲ್ಲವನ್ನೂ ಪಾಳು ಕೊಂಪೆಗೆ ತಳ್ಳುವಂಥ ಕೆಲಸ ಸದ್ದಿಲ್ಲದೆ ನಡೆದಿತ್ತು. ಈಗ ಅದನ್ನೆಲ್ಲ ಸರಿಪಡಿಸಲಾಗುತ್ತಿದೆ’ ಎಂದರು.

‘ನೂರಾರು ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಉದ್ದೇಶವಿದೆ. ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸಿ ತಾಣವನ್ನಾಗಿಸುವ ಯೋಜನೆ ಪ್ರಗತಿಯಲ್ಲಿದೆ. ಜಕ್ಕೂರು ಏರೋಡ್ರೋಮ್‍ ಬೆಂಗಳೂರಿನ ಆಕರ್ಷಣೀಯ ಕೇಂದ್ರವಾಗಬೇಕು. ನೂರಾರು ಯುವಕರು ಪೈಲಟ್‍ ಆಗಬೇಕು. ವಾಣಿಜ್ಯ ಸಂಕೀರ್ಣ ನಿರ್ಮಿಸಿ ಸಾವಿರಾರು ಜನರಿಗೆ ಉದ್ಯೋಗ ಸಿಗುವಂತಾಗಬೇಕು ಎನ್ನುವುದು ನನ್ನ ಆಶಯ’ ಎಂದೂ ನಾರಾಯಣಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT