ಬೆಂಗಳೂರು: ‘ಇಂದು ಮೊಬೈಲ್ನಲ್ಲೇ ಜಗತ್ತನ್ನು ಕಾಣುವುದು ಸಾಧ್ಯವಿದ್ದರೂ, ನಮ್ಮ ಆರೋಗ್ಯ, ಜ್ಞಾನ ಸಂಪಾದನೆಗಾಗಿ ಮೊಬೈಲ್ ಬದಿಗಿಟ್ಟು, ಪುಸ್ತಕ ಕೈಗೆತ್ತಿಕೊಳ್ಳುವುದು ಒಳ್ಳೆಯದು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಶನಿವಾರಸಪ್ನ ಬುಕ್ ಹೌಸ್ನಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತಪ್ರಕಟಿಸಲಾದ 50 ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಆಶೀರ್ವದಿಸಿದರು.
‘ಒಂದು ಪುಸ್ತಕ ಬದುಕನ್ನೇ ಬದಲಿಸಬಲ್ಲುದು ಎಂಬುದಕ್ಕೆ ಖ್ಯಾತ ವಿಜ್ಞಾನಿ ಐನ್ಸ್ಟೀನ್ ನಿದರ್ಶನ, ಅವರಿಗೆ 21 ವರ್ಷವಾಗಿದ್ದಾಗ ಸ್ನೇಹಿತರೊಬ್ಬರು ವಿಜ್ಞಾನ ಪುಸ್ತಕವೊಂದನ್ನು ನೀಡಿದ್ದರು. ಅದನ್ನು ಓದಿದ ಐನ್ಸ್ಟೀನ್ ವಿಜ್ಞಾನದತ್ತ ಪ್ರೇರಣೆಗೊಂಡು ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದರು’ ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ’ನಾವು ಇಂದು ಕೇವಲ 60–70 ಪದಗಳನ್ನಷ್ಟೇ ಬಳಸುತ್ತಿದ್ದೇವೆ. ರಾಜಕಾರಣಿಗಳನ್ನೂ ಕಣ್ಣು ತೆರೆಸುವಂತಹ ಪುಸ್ತಕಗಳು ಪ್ರಕಟವಾಗಬೇಕು‘ ಎಂದರು.
ಹಿರಿಯ ಸಾಹಿತಿಗಳಾದ ಕಮಲಾ ಹಂಪನಾ, ಹಂ.ಪ.ನಾಗರಾಜಯ್ಯ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಸಪ್ನ ಬುಕ್ ಹೌಸ್ನ ಕನ್ನಡ ಕಾಳಜಿಯನ್ನು ಕೊಂಡಾಡಿದರು. ಸಂಸ್ಥೆಯವ್ಯವಸ್ಥಾಪಕ ನಿರ್ದೇಶಕ ನಿತಿನ್ ಶಾ ಇದ್ದರು.
ಸಿದ್ದಲಿಂಗಯ್ಯ, ಕಮಲಾ ಹಂಪನಾ, ಜೋಗಿ, ಸಿ.ಆರ್.ಚಂದ್ರಶೇಖರ್, ಡುಂಡಿರಾಜ್, ವಸುಂಧರಾ ಭೂಪತಿ, ಟಿ.ಆರ್. ಅನಂತರಾಮು ಸಹಿತ ಹಿರಿ, ಕಿರಿಯ ಲೇಖಕರ ಕೃತಿಗಳಿದ್ದವು. ಬಹುತೇಕ ಲೇಖಕರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.