ಬೆಂಗಳೂರು: ‘ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ಎದುರಿಸಲು ಕಾರ್ಮಿಕ ಮಂಡಳಿ ಮೂಲಕ ನೀಡುತ್ತಿರುವ ತರಬೇತಿ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು.
2021–22ನೇ ಸಾಲಿನ ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಪರೀಕ್ಷೆಗೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ತರಬೇತಿ ಆಯ್ಕೆಯಾಗಿರುವ ಕಾರ್ಮಿಕರ ಮಕ್ಕಳಿಗೆ ಪ್ರವೇಶ ಪತ್ರ ವಿತರಿಸಿ ಅವರು ಮಾತನಾಡಿದರು.
‘ಕಾರ್ಮಿಕರ ಮಕ್ಕಳ ಭವಿಷ್ಯ ಕಟ್ಟಿಕೊಡುವ ಉದ್ದೇಶದಿಂದ ಈ ತರಬೇತಿ ಆಯೋಜಿಸಲಾಗಿದೆ. ಬಡವರಿಗೂ ಅರ್ಹತೆ ಮತ್ತು ಯೋಗ್ಯತೆ ಇದೆ. ಹಣಕಾಸಿನ ತೊಂದರೆಯಿಂದ ಅವರು ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಅವಕಾಶ ಕಲ್ಪಿಸಿಕೊಡುವ ಕೆಲಸವನ್ನು ಇಲಾಖೆ ಮಾಡಿದೆ’ ಎಂದರು.
‘ಈ ತರಬೇತಿಗೆ ಮಕ್ಕಳನ್ನು ಸಂಸ್ಥೆ ಮೂಲಕ ಆಯ್ಕೆ ಮಾಡಿದ್ದೇವೆ. ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಮಕ್ಕಳು ತರಬೇತಿ ಪಡೆದು ಅಧಿಕಾರಿಗಳಾಗಿ ಅವರ ಮನೆಗಳಿಗೆ ಬೆಳಕಾಗಬೇಕು’ ಎಂದು ಹಾರೈಸಿದರು. ಕಾರ್ಮಿಕ ಆಯುಕ್ತ ಅಕ್ರಂ ಪಾಷ ಅವರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿಧಾನ ವಿವರಿಸಿದರು.
ಕಾರ್ಮಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕಲ್ಪನಾ, ಮಂಡಳಿಯ ಕಾರ್ಯದರ್ಶಿ ಎಂ.ಪಿ.ಗುರುಪ್ರಸಾದ್, ಜಂಟಿ ಕಾರ್ಯದರ್ಶಿ ಶಿವಪುತ್ರ ಬಾಬುರಾವ್ ಇದ್ದರು.