ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಭಿವೃದ್ಧಿ ಕಾಮಗಾರಿಯಿಂದ 6,316 ಮರಗಳಿಗೆ ಕುತ್ತು?

ಸಿಂಗನಾಯಕನಹಳ್ಳಿ ಕೆರೆ ತುಂಬಿಸುವ ಕಾಮಗಾರಿ * ಮರಗಳ ತೆರವು– ಜನಾಭಿಪ್ರಾಯ ಆಹ್ವಾನಿಸಿದ ಅರಣ್ಯ ಇಲಾಖೆ
Last Updated 17 ಜೂನ್ 2021, 4:55 IST
ಅಕ್ಷರ ಗಾತ್ರ

ಬೆಂಗಳೂರು: ಹೆಬ್ಬಾಳ– ನಾಗವಾರ ಕಣಿವೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಯಲಹಂಕ ಹೋಬಳಿಯ ಸಿಂಗನಾಯಕನಹಳ್ಳಿ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಈ ಕಾಮಗಾರಿಗಾಗಿ 6 ಸಾವಿರಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಲು ತಯಾರಿ ನಡೆಸಿದೆ. ಕೆರೆಯಂಗಳದಲ್ಲಿ ನೈಸರ್ಗಿಕವಾಗಿ ಅಭಿವೃದ್ಧಿಗೊಂಡ ಪರಿಸರ ವ್ಯವಸ್ಥೆಗೆ ಈ ಕಾಮಗಾರಿಯಿಂದ ಧಕ್ಕೆಯಾಗಲಿದೆ ಎಂದು ಪರಿಸರ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಹೆಬ್ಬಾಳ–ನಾಗವಾರ ಕಣಿವೆಯ 65 ಕೆರೆಗಳಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರು ತುಂಬಿಸುವ ಯೋಜನೆಗೆ ಸಿಂಗನಾಯಕನಹಳ್ಳಿ ಕೆರೆಯನ್ನು ಆಯ್ಕೆ ಮಾಡಲಾಗಿದೆ. ಈ ಕೆರೆಯು ಸಿಂಗನಾಯಕನಹಳ್ಳಿ ಅಮಾನಿ ಕೆರೆ ಗ್ರಾಮದ ಸರ್ವೆ ನಂಬರ್‌ 33, ನಾಗದಾಸನಹಳ್ಳಿ ಗ್ರಾಮದ ಸರ್ವೆ ನಂಬರ್‌ 39, ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್‌ 12, ಅದ್ದಿಗಾನಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 7ರ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. 400 ಎಕರೆಗಳಷ್ಟು ವ್ಯಾಪಿಸಿರುವ ಕೆರೆಯಂಗಳದಲ್ಲಿ ಜಾಲಿ, ನೇರಳೆ, ಬೇವು, ನೀಲಗಿರಿ, ಸಿಹಿ ಹುಣಸೆ, ಅಕೇಶಿಯಾ, ಹೊಂಗೆ ಶಿವಾನಿ ಮೊದಲಾದ ಮರಗಳಿವೆ. ಇವುಗಳ ತೆರವಿಗೆ ಅನುಮತಿ ಕೋರಿ ಸಣ್ಣ ನೀರಾವರಿ ಇಲಾಖೆಯು ಅರಣ್ಯ ಇಲಾಖೆಗೆ ಪ್ರಸ್ತಾಪ ಸಲ್ಲಿಸಿದೆ. ಇಲ್ಲಿ ವಿವಿಧ ಜಾತಿಗಳ 6,316 ಜಾತಿಯ ಮರಗಳಿದ್ದು, ಅವುಗಳಿಂದ 403.211 ಘನ ಮೀ. ನಾಟಾ ಹಾಗೂ 3,46,915 ಕೆ.ಜಿ ಸೌದೆ ಲಭಿಸುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.

ಮರಗಳ ತೆರವು ಸಂಬಂಧ ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯು ಸಾರ್ವಜನಿಕರಿಂದ ಸಲಹೆ ಸೂಚನೆ ಹಾಗೂ ಆಕ್ಷೇಪಣೆಗಳನ್ನು ಇದೇ 14ರಂದು ಆಹ್ವಾನಿಸಿದ್ದು, 10 ದಿನಗಳ ಕಾಲಾವಕಾಶ ನೀಡಿದೆ.

‘ಮರಗಳ ತೆರವಿನ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಆಧರಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಕೆರೆಯಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಲು ಹೂಳು ತೆಗೆಯಬೇಕಾಗುತ್ತದೆ. ಈ ಸಂದರ್ಭದಲ್ಲಿ ಮರಗಳನ್ನು ತೆರವುಗೊಳಿಸಲೇಬೇಕು. ಅವುಗಳನ್ನು ಸ್ಥಳಾಂತರ ಮಾಡಿ ಬೇರೆ ಕಡೆ ನಾಟಿ ಮಾಡುವ ಸಾಧ್ಯತೆ ಬಗ್ಗೆ ಇನ್ನಷ್ಟೇ ಪರಿಶೀಲಿಸಬೇಕಿದೆ’ ಎಂದು ಬೆಂಗಳೂರು ನಗರ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಎಸ್‌.ರವಿಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿ ಕೆರೆಯ ಅಂಗಳದಲ್ಲೇ ಸಸಿಗಳನ್ನು ಬೆಳೆಸಿದ್ದರು. ಹಾಗಾಗಿ, ಕೆರೆ ಅಭಿವೃದ್ಧಿ ಕಾಮಗಾರಿಗೆ ತೆರವುಗೊಳಿಸಬೇಕಾಗುವ ಮರಗಳ ಸಂಖ್ಯೆ ಹೆಚ್ಚು ಎಂಬಂತೆ ತೋರುತ್ತದೆ. ಕೆರೆಯಲ್ಲಿ ನೀರಿನ ಆಶ್ರಯ ಇರುವುದರಿಂದ ಮರಗಳು ಹುಲುಸಾಗಿ ಬೆಳೆದಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ಮರ ತೆರವು– ಪ್ರತಿಕ್ರಿಯೆ ನೀಡಲು ವಿಳಾಸ: ಬೆಂಗಳೂರು ನಗರ ಜಿಲ್ಲೆಯ ಉಪ ಅರಣ್ಯಸಂರಕ್ಷಣಾಧಿಕಾರಿ ಕಚೇರಿ,ಅರಣ್ಯ ಭವನ ಸಂಕೀರ್ಣ, ಮಲ್ಲೇಶ್ವರ 18ನೇ ಅಡ್ಡರಸ್ತೆ. ಬೆಂಗಳೂರು.

ಸಂಪರ್ಕ: 080 23343464

ಇ–ಮೇಲ್‌: dcfurban82@yahoo.co.in

***

‘ಕೆರೆಯಲ್ಲಿ ನೀರು ನಿಲ್ಲುವಂತಾದರೆ ಒಳ್ಳೆಯದೇ’

‘ಈ ಕೆರೆ 400 ಎಕರೆಗಳಿಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಇದರಲ್ಲಿ ಗಿಡಗಂಟಿ ಬೆಳೆದುಕೊಂಡಿದೆ. ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಾಮೋದರ್‌ ತಿಳಿಸಿದರು.

‘ಸಿಂಗನಾಯಕನಹಳ್ಳಿ ಕೆರೆಯಲ್ಲಿ ಅಷ್ಟಾಗಿ ನೀರು ನಿಲ್ಲುತ್ತಿಲ್ಲ. ಕೆರೆಯ ಹೂಳೆತ್ತಿ ನೀರು ನಿಲ್ಲುವಂತೆ ಮಾಡಿದರೆ ಆಸುಪಾಸಿನ ಕೃಷಿ ಜಮೀನುಗಳಿಗೆ ಅನುಕೂಲವಾಗುತ್ತದೆ’ ಎಂದು ಸ್ಥಳೀಯರಾದ ಸುಬ್ರಮಣಿ ಅಭಿಪ್ರಾಯಪಟ್ಟರು.

***

‘ಮರಗಳ ತೆರವು–ಕೋವಿಡ್‌ ಸಂದರ್ಭದಲ್ಲಿ ಆತುರ ಬೇಡ’

‘ಸಿಂಗನಾಯಕನಹಳ್ಳಿ ಕೆರೆಯಂಗಳದಲ್ಲಿ ಕಳೆದೆರಡು ದಶಕಗಳಿಂದ ಕಿರು ಕಾಡು ರೂಪುಗೊಂಡಿದೆ. ಇಲ್ಲಿ 40ಕ್ಕೂ ಅಧಿಕ ನವಿಲುಗಳಿವೆ. ನಾನಿಲ್ಲಿ ನರಿಯನ್ನೂ ನೋಡಿದ್ದೇನೆ. ಇಲ್ಲಿನ ಮರಗಳನ್ನು ತೆರವುಗೊಳಿಸುವ ಬಗ್ಗೆ ಕೋವಿಡ್‌ ಹರಡಿರುವ ಈಗಿನ ಸಂದರ್ಭದಲ್ಲಿ ಆತುರದ ನಿರ್ಧಾರ ಸಲ್ಲದು. ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಸ್ಥಳೀಯರು, ಪರಿಸರ ಹೋರಾಟಗಾರರು ಹಾಗೂ ತಜ್ಞರೆಲ್ಲರ ಅಭಿಪ್ರಾಯ ಪಡೆದು ಅರಣ್ಯ ಇಲಾಖೆ ತೀರ್ಮಾನಿಸಬೇಕು’ ಎಂದು ಪರಿಸರ ಹೋರಾಟಗಾರ ವಿಜಯ್‌ ನಿಶಾಂತ್‌ ಒತ್ತಾಯಿಸಿದರು.

***

‘ಪರಿಸರ ವ್ಯವಸ್ಥೆ ಉಳಿಸಿಕೊಂಡೇ ಅಭಿವೃದ್ಧಿಪಡಿಸಲಿ’

‘ಸಿಂಗನಾಯಕನಹಳ್ಳಿ ಕೆರೆಯಂಗಳದಲ್ಲಿ ಬೆಳೆದ ಕಿರು ಕಾಡು ಮೊಲ, ನರಿ, ನವಿಲಿನಂತಹ ಅನೇಕ ಪ್ರಾಣಿ ಪಕ್ಷಿಗಳಿಗೆ ನೆಲೆ ಒದಗಿಸಿದೆ. ಪರಿಸರ ವ್ಯವಸ್ಥೆ ಮತ್ತು ಜೀವ ವೈವಿಧ್ಯವನ್ನು ಉಳಿಸಿಕೊಂಡೂ ಕೆರೆಯ ಅಭಿವೃದ್ಧಿ ಸಾಧ್ಯ. ಕೆರೆಯೆಂದರೆ ನೀರು ಸಂಗ್ರಹಿಸುವ ತೊಟ್ಟಿ, ಅದರ ಅಭಿವೃದ್ಧಿಯೆಂದರೆ ನಡಿಗೆ ಪಥ ನಿರ್ಮಾಣ ಎಂಬ ಮನೋಭಾವವನ್ನು ಮೊದಲು ತ್ಯಜಿಸಬೇಕು. ಎಲ್ಲವನ್ನೂ ಮನುಷ್ಯ ಕೇಂದ್ರಿತವಾಗಿ ಆಲೋಚಿಸಿ ಪರಿಸರ ವ್ಯವಸ್ಥೆಗೆ ಧಕ್ಕೆ ತರಬಾರದು’ ಎನ್ನುತ್ತಾರೆ ಕೆರೆ ಪುನಃಶ್ಚೇತನ ತಜ್ಞ ವಿ.ರಾಮಪ್ರಸಾದ್‌.

***

ಯಾವೆಲ್ಲ ಮರಗಳಿಗೆ ಕುತ್ತು?

ಮರ; ಸಂಖ್ಯೆ

ಬೇವು; 8

ನೇರಳೆ; 168

ಸಿಸು; 550

ಸಿಹಿಹುಣಸೆ; 9

ಅಕೇಶಿಯಾ; 940

ಜಾಲಿ; 4026

ಹೊಂಗೆ; 560

ತೊರೆ ಮತ್ತಿ; 24

ಶಿವಾನಿ; 10

ಇತರೆ; 21

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT