ಬೆಂಗಳೂರು: ಬಾಲಕಿಯೊಬ್ಬರನ್ನು ಅಕ್ರಮವಾಗಿ ದತ್ತು ಪಡೆದಿದ್ದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿದ್ದ ಕಿರುತೆರೆ ಸಹನಟಿ ಸೋನು ಶ್ರೀನಿವಾಸ್ ಗೌಡ ಅಲಿಯಾಸ್ ಶಾಂಭವಿ (29) ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಶನಿವಾರ ಹೊರಗೆ ಬಂದಿದ್ದಾರೆ.
ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ (ಬೆಂಗಳೂರು ಪಶ್ಚಿಮ) ಕಾನೂನು ಪರಿವೀಕ್ಷಣಾ ಅಧಿಕಾರಿ ಗೀತಾ ನೀಡಿದ್ದ ದೂರು ಆಧರಿಸಿ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ್ದ ಬಳಿಕ ಸೋನು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಸೋನು ಗೌಡ ಅವರಿಗೆ ಜಾಮೀನು ನೀಡುವಂತೆ ಕೋರಿ ಅವರ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಎಲ್ಲ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಸೋನು ಗೌಡ ಶನಿವಾರ ರಾತ್ರಿ ಜೈಲಿನಿಂದ ಹೊರಗೆ ಬಂದರು.
ಜೈಲಿನಿಂದ ಹೊರಗೆ ಬರುತ್ತಿದ್ದಂತೆ ತಮ್ಮ ವಕೀಲರ ಜೊತೆ ಮಾತನಾಡಿದರು. ನಂತರ, ಕಾರಿನಲ್ಲಿ ಹೊರಟು ಹೋದರು. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.