ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ನಾವೀನ್ಯ ವಿನಿಮಯ ‘ಸೃಷ್ಟಿ’ ಇದೇ 24 ರಿಂದ

Published 22 ಮೇ 2024, 15:28 IST
Last Updated 22 ಮೇ 2024, 15:28 IST
ಅಕ್ಷರ ಗಾತ್ರ

ಬೆಂಗಳೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ವತಿಯಿಂದ ಇದೇ 24ರಿಂದ 26ರವರೆಗೆ ‘ಸೃಷ್ಟಿ–2024’ ನಾವೀನ್ಯ ವಿನಿಮಯ ಕಾರ್ಯಕ್ರಮವು ಹೆಬ್ಬಾಳದ ಏಟ್ರಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಆವರಣದಲ್ಲಿ ನಡೆಯಲಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ಎಚ್.ಕೆ. ಪ್ರವೀಣ್, ‘ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೇರಿದಂತೆ ವೈಜ್ಞಾನಿಕ, ಸಂಶೋಧನಾ ಮನೋಭಾವವುಳ್ಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಕಾಲೇಜುಗಳ ಸುಮಾರು 3,500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅಂತಿಮ ವರ್ಷದ 300ಕ್ಕೂ ಹೆಚ್ಚು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸಲಿದ್ದಾರೆ’ ಎಂದರು.

‘ಸೃಷ್ಟಿ 2024’ರಲ್ಲಿ 48 ಗಂಟೆಗಳ ಹ್ಯಾಕಥಾನ್‌ ನಡೆಯಲಿದ್ದು, 70ಕ್ಕೂ ಹೆಚ್ಚು ತಂಡಗಳು ಈಗಾಗಲೇ ನೋಂದಾಯಿಸಿಕೊಂಡಿವೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಜಯಶೀಲರಾಗುವ ವಿದ್ಯಾರ್ಥಿಗಳಿಗೆ ₹25 ಲಕ್ಷ ವರೆಗಿನ ಬಹುಮಾನ ವಿತರಿಸಲಾಗುವುದು. ಅಷ್ಟೇ ಅಲ್ಲದೇ ವಿವಿಧ ಗುಂಪುಗಳಲ್ಲಿ ನಡೆಯುವ ಸ್ಪರ್ಧೆಯ ಎಲ್ಲ ಹಂತಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಶೈಕ್ಷಣಿಕ ಸಂಸ್ಥೆಗಳಿಗೆ ಚಾಂಪಿಯನ್‌ ಹಾಗೂ ರನ್ನರ್ಸ್‌ ಅಪ್‌ ಪ್ರಶಸ್ತಿಯನ್ನು ನೀಡಲಾಗುವುದು’ ಎಂದು ತಿಳಿಸಿದರು.

ಇದೇ 24ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಎ.ಎಸ್.ಕೆ.ಬಿ. ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಸಿ.ಎಸ್. ಸುಂದರ ರಾಜು ಅವರು ಅಧ್ಯಕ್ಷತೆ ವಹಿಸಲಿದ್ದು, ಯುಜಿಸಿ ಉಪಾಧ್ಯಕ್ಷ ದೀಪಕ್ ಕುಮಾರ್ ಶ್ರೀವತ್ಸ, ಮರ್ಸಿಡಿಸ್‌ ಬೆಂಜ್‌ನ ವ್ಯವಸ್ಥಾಪಕ ನಿರ್ದೇಶಕ ಮನು ಸಾಳೆ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಉಪಕುಲಪತಿ ಎಸ್. ವಿದ್ಯಾಶಂಕರ್, ಎಬಿವಿಪಿ ಸಂಘಟನಾ ಕಾರ್ಯದರ್ಶಿ ಆಶಿಶ್ ಚೌಹಾಣ್‌ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT