ಬೆಂಗಳೂರು: ಉಪನಗರ ರೈಲು ಯೋಜನೆಯ ಅನುಷ್ಠಾನಕ್ಕಾಗಿ ಜರ್ಮನಿಯ ಕೆಎಫ್ಡಬ್ಲ್ಯು ಡೆವಲಪ್ಮೆಂಟ್ ಬ್ಯಾಂಕ್ ಜತೆ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಒಪ್ಪಂದ ಮಾಡಿಕೊಂಡಿದೆ.
ದೆಹಲಿಯಲ್ಲಿ ಶನಿವಾರ ಎರಡೂ ಸಂಸ್ಥೆಯ ಉನ್ನತ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಯೋಜನೆಗೆ ₹4,500 ಕೋಟಿ ಸಾಲ ಮತ್ತು ₹45 ಕೋಟಿ ಅನುದಾನ ಸಿಗಲಿದೆ. ಇದರಿಂದ ಬೆಂಗಳೂರು ಉಪನಗರ ರೈಲು ಯೋಜನೆಯ ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಬೆಂಗಳೂನಲ್ಲಿ ಸುಗಮ ಸಂಚಾರ ವ್ಯವಸ್ಥೆಗಾಗಿ ₹15,767 ಕೋಟಿ ವಿನಿಯೋಗಿಸಲಾಗುತ್ತಿದೆ. ಹಲವು ಹಣಕಾಸು ಸಂಸ್ಥೆಗಳಿಂದ ₹7,438 ಕೋಟಿ ಸಾಲವಾಗಿ ತೆಗೆದುಕೊಳ್ಳಲಾಗುತ್ತಿದೆ. ಯೋಜನೆಯನ್ನು ಕೆ-ರೈಡ್ ಮತ್ತು ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯದ ಮೂಲಕ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬ್ಯಾಂಕ್ ಅಧಿಕಾರಿ ಫಿಲಿಫ್ ವೈಶ್, ಉಪನಿರ್ದೇಶಕಿ ರುಕ್ಮಿಣಿ ಪಾರ್ಥಸಾರಥಿ, ಸ್ವಾತಿ ಖನ್ನಾ, ಕೇಂದ್ರ ಆರ್ಥಿಕ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮಾನಿಶಾ ಸಿನ್ಹಾ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರಮೂರ್ತಿ ಉಪಸ್ಥಿತರಿದ್ದರು.