ಬೆಂಗಳೂರು: ಕಮ್ಮಗೊಂಡನಹಳ್ಳಿಯ ‘ಅಶೋಕ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್’ನ ಶಿಕ್ಷಕಿ ಎಂ.ಪಿ. ಸುಮತಿ (28) ಶಾಲೆಯ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ಸಂಜೆ ತರಗತಿ ಮುಗಿದ ಬಳಿಕ, ಎಲ್ಕೆಜಿ ಕೊಠಡಿಗೆ ತೆರಳಿ ನೇಣು ಹಾಕಿಕೊಂಡಿದ್ದಾರೆ. ಮರುದಿನ ಈದ್–ಮಿಲಾದ್ ಪ್ರಯುಕ್ತ ಶಾಲೆಗೆ ರಜೆ ಇದ್ದುದರಿಂದ ಆತ್ಮಹತ್ಯೆ ವಿಚಾರ ಯಾರಿಗೂ ಗೊತ್ತಾಗಿಲ್ಲ. ಗುರುವಾರ ಬೆಳಿಗ್ಗೆ ಸಿಬ್ಬಂದಿ ಶಾಲೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಐದು ವರ್ಷದ ಹಿಂದೆ ಚೆನ್ನೈನ ನಾಗರಾಜ್ ಎಂಬುವರನ್ನು ವಿವಾಹವಾಗಿದ್ದ ಸುಮತಿ, ಪೋಷಕರ ಜತೆ ಜಾಲಹಳ್ಳಿಯಲ್ಲಿ ನೆಲೆಸಿದ್ದರು. ಚೆನ್ನೈನಲ್ಲಿ ಒಳಾಂಗಣ ವಿನ್ಯಾಸಕಾರರಾಗಿರುವ ನಾಗರಾಜ್, 15 ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು.
ದೂರ ಶಿಕ್ಷಣದಲ್ಲಿ ಬಿ.ಇಡಿ ವ್ಯಾಸಂಗ ಮಾಡುತ್ತಿದ್ದ ಸುಮತಿ, ಎಂಟು ತಿಂಗಳ ಹಿಂದೆ ಈ ಶಾಲೆಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಸದ್ಯ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಶಾಲೆಯ ಇತರೆ ಶಿಕ್ಷಕರು ಹಾಗೂ ಮೃತರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಗಂಗಮ್ಮನಗುಡಿ ಪೊಲೀಸರು ಹೇಳಿದ್ದಾರೆ.
ಕೊರಗುತ್ತಿದ್ದಳು: ‘ಮದುವೆ ಆಗಿ ಐದು ವರ್ಷ ಕಳೆದರೂ ಮಕ್ಕಳಾಗಿಲ್ಲ ಎಂಬ ಕೊರಗು ಸುಮತಿಗಿತ್ತು. ಆ ನೋವನ್ನು ಹೇಳಿಕೊಂಡು ಅಳುತ್ತಿದ್ದಳು. ಈಗ ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಮೃತರ ತಂದೆ ಪುರುಷೋತ್ತಮ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.
‘ಚೆನ್ನೈಗೆ ಹೋಗಿದ್ದಾಳೆ ಎಂದುಕೊಂಡಿದ್ದೆ’
‘ಮಂಗಳವಾರ ರಾತ್ರಿಯಾದರೂ ಮಗಳು ಮನೆಗೆ ಬಂದಿರಲಿಲ್ಲ. ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಸಹೋದ್ಯೋಗಿಗಳಿಗೆ ಕರೆ ಮಾಡಿದರೂ ಸುಳಿವು ಸಿಗಲಿಲ್ಲ. ಕೆಲವೊಮ್ಮೆ ಸುಮತಿ ಹೇಳದೆ–ಕೇಳದೆ ಚೆನ್ನೈಗೆ ಹೋಗಿ ಪತಿಯನ್ನು ಭೇಟಿಯಾಗುತ್ತಿದ್ದಳು. ಅಲ್ಲಿಗೆ ಹೋದ ಬಳಿಕ ನಮಗೆ ಕರೆ ಮಾಡಿ ಹೇಳುತ್ತಿದ್ದಳು. ಬುಧವಾರ ರಜೆ ಇದ್ದುದರಿಂದ ಚೆನ್ನೈಗೇ ಹೋಗಿರಬಹುದು ಎಂದುಕೊಂಡು ಸುಮ್ಮನಾಗಿದ್ದೆವು’ ಎಂದು ಪುರುಷೋತ್ತಮ್ ಹೇಳಿದ್ದಾರೆ.