ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎನ್ಐಎ ಅಧಿಕಾರಿಗಳು, ಶಂಕಿತನ ಪತ್ತೆಗಾಗಿ ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಕೆಲವರನ್ನು ವಿಚಾರಣೆ ನಡೆಸಿರುವುದಾಗಿ ಗೊತ್ತಾಗಿದೆ.
‘ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟಕ್ಕೂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇದೆ’ ಎಂಬುದಾಗಿ ಹಲವು ತನಿಖಾ ತಂಡಗಳು ಅಭಿಪ್ರಾಯಪಟ್ಟಿವೆ. ಇದೇ ಕಾರಣಕ್ಕೆ ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಎನ್ಐಎ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
2022ರ ನ.19ರಂದು ಮಂಗಳೂರಿನ ನಾಗುರಿಯಲ್ಲಿ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಶಂಕಿತ ಶಾರೀಕ್ ತೀವ್ರ ಗಾಯಗೊಂಡಿದ್ದ. ಈತ ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಜೈಲಿಗೆ ಭೇಟಿ ನೀಡಿದ್ದ ಎನ್ಐಎ ಅಧಿಕಾರಿಗಳು, ಶಾರೀಕ್ನನ್ನೂ ವಿಚಾರಣೆ ನಡೆಸಿರುವುದಾಗಿ ಮೂಲಗಳು ಹೇಳಿವೆ.
‘ಶಂಕಿತ ಶಾರೀಕ್, ಶಿವಮೊಗ್ಗದಲ್ಲಿ ಬಾಂಬ್ ಸ್ಫೋಟದ ಬಗ್ಗೆ ತರಬೇತಿ ಪಡೆದುಕೊಂಡಿದ್ದ. ಜೊತೆಗೆ, ಸ್ಫೋಟದ ಪರೀಕ್ಷೆಯನ್ನೂ ನಡೆಸಿದ್ದ. ಈತನ ಜೊತೆ ಹಲವರನ್ನು ತರಬೇತಿ ಪಡೆದಿರುವ ಮಾಹಿತಿ ಇದೆ. ಅವರು ಯಾರು ಎಂಬುದನ್ನು ಪತ್ತೆ ಮಾಡಲು ಎನ್ಐಎ ಪ್ರಯತ್ನಿಸುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಕೆಫೆಗೆ ಎನ್ಐಎ ಐಜಿಪಿ ಭೇಟಿ: ದಿ ರಾಮೇಶ್ವರಂ ಕೆಫೆಗೆ ಎನ್ಐಎ ಐಜಿಪಿ ಸಂತೋಷ್ ರಸ್ತೋಗಿ ಹಾಗೂ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು. ಸ್ಥಳೀಯ ಪೊಲೀಸರ ಜೊತೆ ಚರ್ಚಿಸಿ, ಸ್ಫೋಟದ ಬಗ್ಗೆ ಮಾಹಿತಿ ಪಡೆದುಕೊಂಡರು.