ಬೆಂಗಳೂರು: ಸ್ಯಾಂಕಿ ರಸ್ತೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗಾಗಿ ಮೀಸಲಿಟ್ಟ ಸರ್ಕಾರಿ ವಸತಿಗೃಹದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಟಿ.ವಿ, ಪೀಠೋಪಕರಣ ಸೇರಿ ₹ 45 ಸಾವಿರ ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಕಟ್ಟಡಗಳ ಉಪವಿಭಾಗದ ಎಂಜಿನಿಯರ್ ಆಸೀಫುಲ್ಲ ಷರೀಫ್ ನೀಡಿದ ದೂರಿನ ಆಧಾರದಲ್ಲಿ ಹೈಗ್ರೌಂಡ್ಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಟ್ಟಡಗಳ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ವಸತಿಗೃಹ– 29 ಯಾರಿಗೂ ಹಂಚಿಕೆಯಾಗದೆ ಖಾಲಿ ಉಳಿದಿದೆ.
ಅತಿಗಣ್ಯ ವ್ಯಕ್ತಿಗಳ ನಿವಾಸ ಆಗಿರುವುದರಿಂದ ಕಾಲ ಕಾಲಕ್ಕೆ ಸ್ವಚ್ಚಗೊಳಿಸಿ ಕಟ್ಟಡವನ್ನು ಸುಸ್ಥಿತಿಯಲ್ಲಿಡಲಾಗುತ್ತದೆ. 8ರಂದು ಬೆಳಿಗ್ಗೆ 11 ಗಂಟೆಗೆ ಸ್ವಚ್ಛತೆಗೆ ಸಿಬ್ಬಂದಿ ತೆರಳಿದ ವೇಳೆ ಕಳವು ನಡೆದಿರುವುದು ಗೊತ್ತಾಗಿದೆ.