ಬೆಂಗಳೂರು: ವಕೀಲರೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ಅಪಹರಿಸಿ ₹20 ಸಾವಿರ ಸುಲಿಗೆ ಮಾಡಿದ್ದ ಹೊಸಕೆರೆಹಳ್ಳಿಯ ನಂದೀಶ್ (30) ಹಾಗೂ ಯಶವಂತ (31) ಎಂಬುವರನ್ನು ಗಿರಿನಗರದ ಪೊಲೀಸರು ಬಂಧಿಸಿದ್ದಾರೆ.
ಹಾಸನದ ಶಾಂತಿ ಗ್ರಾಮದ ನಿವಾಸಿ, ವಕೀಲ ಅಶೋಕ್ ಅವರು ಬೆಂಗಳೂರಿನ ಹನುಮಂತನಗರದ ನಾಗೇಂದ್ರ ಬ್ಲಾಕ್ನಲ್ಲಿ ನೆಲೆಸಿದ್ದರು. ಜೂನ್ 19ರಂದು ರಾತ್ರಿ 2.30ಕ್ಕೆ ಬೆಂಗಳೂರಿಗೆ ಬಂದಿದ್ದು, ಕ್ಯಾಬ್ ಮೂಲಕ ಹನುಮಂತನಗರದ ಪಿಇಎಸ್ ಕಾಲೇಜು ಬಳಿ ಇಳಿದುಕೊಂಡು ಮನೆಗೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಆಟೊದಲ್ಲಿ ಬಂದ ಐವರು ಆರೋಪಿಗಳು ವಿಳಾಸ ಕೇಳುವ ನೆಪದಲ್ಲಿ ಹಲ್ಲೆ ಮಾಡಿ ಅಪಹರಿಸಿದ್ದರು.
‘ಬೆಳಿಗ್ಗೆ ನೈಸ್ ರಸ್ತೆಯಲ್ಲಿ ಸುತ್ತಾಡಿಸಿ ರವಿಶಂಕರ್ ಗುರೂಜಿ ಆಶ್ರಮದ ಬಳಿ ಹಲ್ಲೆ ನಡೆಸಿ ಹಣ ನೀಡುವಂತೆ ಬೆದರಿಕೆ ಹಾಕಿದ್ದರು. ಆದರೆ, ಅಶೋಕ ಅವರ ಬಳಿ ₹ 200 ಮಾತ್ರವೇ ಇತ್ತು. ನಂತರ ಸ್ನೇಹಿತರಿಗೆ ಕರೆ ಮಾಡಿ ಹಣ ಹಾಕಿಸಿಕೊಳ್ಳುವಂತೆ ಧಮ್ಕಿ ಹಾಕಿದ್ದರು. ಅಶೋಕ ಅವರ ಸ್ನೇಹಿತರಿಂದ ₹20 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡ ಆರೋಪಿಗಳು ಎಟಿಎಂ ಕಾರ್ಡ್ ಕಸಿದುಕೊಂಡು ಹಣ ಡ್ರಾ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಅಶೋಕ ಅವರು ಗಿರಿನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇತರೆ ಆರೋಪಿಗಳಿಗೆ ಶೋಧ ಕಾರ್ಯ ನಡೆದಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.