ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಸಹೋದರರಿಬ್ಬರನ್ನು ಹತ್ಯೆ ಮಾಡಲಾಗಿದ್ದು, ಅವರಿಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಪತ್ತೆ ಆಗಿದೆ.
‘ಕೊಲೆಯಾದವರನ್ನು ಕಲ್ಯಾಣನಗರದ ಸಹದೇವ (27) ಹಾಗೂ ರಘುಸ್ವಾಮಿ (29) ಎಂದು ಗುರುತಿಸಲಾಗಿದೆ. ಇಬ್ಬರೂ ಕಟ್ಟಡ ನಿರ್ಮಾಣದ ಕಾರ್ಮಿಕರು. ನಿರ್ಮಾಣ ಹಂತದ ಕಟ್ಟಡದಲ್ಲೇ ಅವರಿಬ್ಬರನ್ನು ಕೊಲೆ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕಟ್ಟಡದ ಕೊಠಡಿಯೊಂದರಲ್ಲಿ ಸಹದೇವ್, ರಘುಸ್ವಾಮಿ ಹಾಗೂ ಅವರಿಬ್ಬರ ಅಣ್ಣ ಉಳಿದುಕೊಂಡಿದ್ದರು. ಅಲ್ಲಿಯೇ ಅಡುಗೆ ಮಾಡಿಕೊಂಡು ಒಟ್ಟಿಗೆ ಊಟ ಮಾಡುತ್ತಿದ್ದರು. ಎರಡು ದಿನಗಳ ಹಿಂದೆ ಅವರ ನಡುವೆ ಜಗಳವಾಗಿ ಈ ಕೊಲೆ ನಡೆದಿರುವ ಅನುಮಾನವಿದೆ.’
‘ಮೃತರ ಅಣ್ಣ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ. ಎಲ್ಲ ಆಯಾಮದಲ್ಲೂ ತನಿಖೆ ಮುಂದುವರಿದಿದೆ’ ಎಂದರು.
‘ಸಹೋದರರಿಬ್ಬರ ಮೇಲೆ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಲಾಗಿದೆ. ಕುಡಿದ ಅಮಲಿನಲ್ಲಿ ಜಗಳ ನಡೆದಿರುವ ಸಾಧ್ಯತೆಯೂ ಇದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಅದರ ವರದಿ ಬಂದ ನಂತರವೇ ಕೊಲೆಗೆ ನಿಖರ ಕಾರಣ ತಿಳಿಯಲಿದೆ. ಸಂಬಂಧಿಕರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಪೊಲೀಸರು ಹೇಳಿದರು.