ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಅಪಘಾತ: ಟೆಕಿ ಸೇರಿ ಇಬ್ಬರ ಸಾವು

Last Updated 28 ಮೇ 2022, 15:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

‘ಸಾಫ್ಟ್‌ವೇರ್ ಎಂಜಿನಿಯರ್ (ಟೆಕಿ) ಶ್ರೀಕಾಂತ್ (23) ಹಾಗೂ ಖಾಸಗಿ ಕಂಪನಿಯೊಂದರ ವ್ಯವಸ್ಥಾಪಕ ಸನ್ಮಿತ್ (34) ಮೃತರು. ಎರಡೂ ಅಪಘಾತಗಳ ಬಗ್ಗೆ ಬನಶಂಕರಿ ಹಾಗೂ ಚಿಕ್ಕಜಾಲ ಸಂಚಾರ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಹೇಳಿದರು.

ಮರಕ್ಕೆ ಗುದ್ದಿದ್ದ ಬೈಕ್: ‘ವಿದ್ಯಾಪೀಠ ನಿವಾಸಿ ಶ್ರೀಕಾಂತ್, ಶುಕ್ರವಾರ ರಾತ್ರಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದರು. ನಂತರ, ಸ್ನೇಹಿತರೆಲ್ಲ ಪ್ರತ್ಯೇಕವಾಗಿ ಬೈಕ್‌ನಲ್ಲಿ ಹೊರಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಶ್ರೀಕಾಂತ್ ಚಲಾಯಿಸುತ್ತಿದ್ದ ಬೈಕ್, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡ ಶ್ರೀಕಾಂತ್ ರಸ್ತೆಯಲ್ಲೇ ನರಳುತ್ತಿದ್ದರು. ಅದೇ ಮಾರ್ಗವಾಗಿ ಬಂದ ಸ್ನೇಹಿತರು, ಶ್ರೀಕಾಂತ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.

‘ಮದ್ಯದ ಅಮಲಿನಲ್ಲಿ ಬೈಕ್ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವೆಂಬುದು ಗೊತ್ತಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ’ ಎಂದೂ ಪೊಲೀದರು ಹೇಳಿದರು.

ಬೈಕ್‌ ಉರುಳಿ ಬಿದ್ದು ಸಾವು: ಚಿಕ್ಕಜಾಲ ಸಂಚಾರ ಠಾಣೆ ವ್ಯಾಪ್ತಿಯ ಮಾನ್ಯತಾ ಟೆಕ್‌ಪಾರ್ಕ್‌ 2ನೇ ಅಡ್ಡರಸ್ತೆ ಜಂಕ್ಷನ್‌ನಲ್ಲಿ ಬೈಕ್ ಉರುಳಿಬಿದ್ದು ಸನ್ಮಿತ್ ಮೃತಪಟ್ಟಿದ್ದಾರೆ.

‘ಸನ್ಮಿತ್ ಅವರು ಕೆಲಸ ಮುಗಿಸಿಕೊಂಡು ಶುಕ್ರವಾರ ರಾತ್ರಿ 7.40ರ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಢ ಸಂಭವಿಸಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT